ಕೆಂಭಾವಿ: ರೈತರ ಅನುಕೂಲಕ್ಕೆ ಸರ್ಕಾರ ಕಾಲುವೆಗೆ ನೀರು ಹರಿಸಿದ್ದು, ಬೇಸಿಗೆಯಲ್ಲಿ ಕೆಲಸ ನಿರ್ವಹಿಸಬೇಕಾದ ಅಧಿಕಾರಿಗಳು ಕಾಲುವೆಗೆ ನೀರು ಹರಿದ ನಂತರವೂ ಗೇಟ್ಗಳ ನಿರ್ವಹಣೆ ಮತ್ತು ಬ್ರಿಡ್ಜ್ಗಳ ಸುತ್ತಮುತ್ತ ಗಿಲಾವ (ಪ್ಲಾಸ್ಟರ್) ಕೆಲಸ ಮಾಡಲು ಅಣಿಯಾಗಿದ್ದು ಬುಧವಾರ ಪಟ್ಟಣದ ನಾರಾಯಣಪುರ ಮುಖ್ಯ ಕಾಲುವೆಯಲ್ಲಿ ಕೆಲಸ ನಿರ್ವಹಣೆಯ ಸಮಯದಲ್ಲಿ ದೊಡ್ಡ ದುರಂತ ತಪ್ಪಿದೆ.
ಕಾಮಗಾರಿ ನಿರ್ವಹಿಸಲು ಕಾರ್ಮಿಕರಿಗೆ ಅನುಕೂಲವಾಗುವಂತೆ ಕೆಲಸ ಪಡೆದ ಗುತ್ತಿಗೆದಾರರು ಕಾಲುವೆಯ ಮಧ್ಯ ಭಾಗದಲ್ಲಿ ದೊಡ್ಡ ಬಲ್ಲೀಸ್ಗಳ ಮೂಲಕ ನಿಲ್ಲುವುದಕ್ಕೆ ಸ್ಥಳಾವಕಾಶ ಮಾಡಿದ್ದಾರೆ. ಈ ಮೊದಲು ಕಾಲುವೆಯಲ್ಲಿ ನೀರಿನ ಹರಿವಿಲ್ಲದೆ ಇರುವುದರಿಂದ ಕೆಲಸ ನಿರ್ವಹಣೆ ಸರಳವಾಗಿ ಮುಂದುವರೆದಿತ್ತು. ಆದರೆ, ಜುಲೈ 21 ರಿಂದ ಕಾಲುವೆಗೆನೀರು ಹರಿದಿದ್ದು ಬುಧವಾರ ಕಾಮಗಾರಿ ನಡೆಯುತ್ತಿದ್ದ ವೇಳೆ ನೀರಿನ ರಭಸಕ್ಕೆ ದಿಢೀರ್ ಕುಸಿತ ಕಂಡ ಬಲ್ಲೀಸ್ ಜೋಡಣೆ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ನೀರಿನಲ್ಲಿ ಕೊಚ್ಚಿ ಹೋಗುವಂತೆ ಮಾಡಿತು. ಅದೃಷ್ಟವಶಾತ್ ನೀರಿನಲ್ಲಿ ಬಿದ್ದ ಮೂರು ಜನ ಕಾರ್ಮಿಕರು ಈಜಿ ದಡ ಸೇರಿದರು.
ಬೇಸಿಗೆಯಲ್ಲಿ ಕಾಲುವೆ ಕೆಲಸ ನಿರ್ವಹಿಸಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಾಲುವೆಗೆ ನೀರು ಹರಿದ ನಂತರ ಅವಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದು ಬಡ ಕಾರ್ಮಿಕರ ಜೀವಕ್ಕೆ ಆಪತ್ತು ತರುವುದರ ಜೊತೆಗೆ ಕಾಲುವೆ ಕೆಲಸವೂ ಸಂಪೂರ್ಣ ಕಳಪೆ ಮಟ್ಟದ್ದಾಗುತ್ತದೆ ಎಂದು ಸ್ಥಳದಲ್ಲಿದ್ದ ಜನರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.