ಯಾದಗಿರಿ: ಜಿಲ್ಲೆಯ ಆರು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದ್ದು, ಮತ್ತೊಂದೆಡೆ ಜಾನುವಾರು ಕಳವು ರೈತರ ನಿದ್ದೆಗೆಡಿಸಿದೆ.
ಗ್ರಾಮೀಣ ಭಾಗದಲ್ಲಿ ರಾತ್ರೋರಾತ್ರಿ ಜಾನುವಾರುಗಳ ಕಳ್ಳ ಸಾಗಾಟ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ರೈತರು ಹೈರಾಣಾಗಿದ್ದಾರೆ.
ಮೊದಲೇ ಭೀಕರ ಬರಗಾಲ, ಇರುವ ಜಾನುವಾರುಗಳಾದ ಎಮ್ಮೆ, ಆಕಳು ಮನೆಗೆ ನಂಬಿ ಅಲ್ಪಸ್ವಲ್ಪ ಹೈನು ಕೊಡುತ್ತಿದ್ದವು. ಕಳೆದ 15 ದಿನಗಳ ಹಿಂದೆ ಜಿಲ್ಲೆಯಾದ್ಯಂತ ಎಲ್ಲಿ ಕೇಳಿದರೂ ನಮ್ಮದು ಆಕಳು ಇಲ್ಲ, ನಮ್ಮದು ಎಮ್ಮೆ, ಹೋರಿಗಳು ಇಲ್ಲ ಎಂಬ ರೈತರು ಹೇಳುತ್ತಾರೆ.
ರಾತ್ರೋರಾತ್ರಿ ಕಳ್ಳಸಾಗಣೆ ಮಾಡಿ, ಮಾರಾಟ ಮಾಡುವ ದೊಡ್ಡ ಪ್ರಮಾಣದ ದಂಧೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ರೈತರು ಪೊಲೀಸ್ ಠಾಣೆ ದೂರು ಕೊಡಲು ಹಿಂಜರಿಯುತ್ತಿದ್ದಾರೆ. ಎಲ್ಲಿ ಕೋರ್ಟ್, ಕಚೇರಿ ಸುತ್ತೋಣ ಎಂಬ ಅನಿಸಿಕೆ ರೈತರದ್ದು.
ಜಾನುವಾರು ಕಳವು ದಂಧೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಇದಕ್ಕೆ ದೊಡ್ಡ ತಂಡವೇ ಇದೆ ಎಂದು ರೈತರು ಹೇಳುವ ದೂರಾಗಿದೆ.
ಕಳ್ಳರ ತಂಡ ರಾಸುಗಳು ಎಲ್ಲಿ ಇವೆ ಎಂದು ಮೊದಲು ಬೈಕ್ನಲ್ಲಿ ತಿರುಗಾಡುತ್ತಿದ್ದಾರೆ. ನಂತರ ಯೋಜನೆ ರೂಪಿಸುತ್ತಾರೆ. ಆನಂತರ ಹಸುಗಳ ಕಾಲು ಮುರಿದು ವಾಹನದಲ್ಲಿ ಕದ್ದುಕೊಂಡು ಹೋಗುತ್ತಾರೆ. ಗಸ್ತು ಪೊಲೀಸರಿಗೆ ಇದೆಲ್ಲ ಮಾಹಿತಿ ಇದ್ದರೂ ಯಾವುದೇ ಕ್ರಮಗೊಂಡಿಲ್ಲ ರೈತರ ಆರೋಪವಾಗಿದೆ.
‘ಹಲವಾರು ಜನ ಈಗ ದನಗಳನ್ನು ಸಾಕುತ್ತಿಲ್ಲ. ಸಾಕುವವರಿಗೆ ಕಳ್ಳರ ಶುರುವಾಗಿದೆ. ಕಳ್ಳರು ಜಾನುವಾರುಗಳನ್ನು ಖಾಸಾಯಿಖಾನೆಗೆ ಸಾಗಿಸುತ್ತಾರೆ. ಇದು ಪೊಲೀಸ್ ಇಲಾಖೆ ವೈಫಲ್ಯ ತೋರಿಸುತ್ತದೆ. ಕಳ್ಳರಿಗೆ ಪೊಲೀಸರ ಭಯ ಇಲ್ಲ. ಜಿಲ್ಲೆಯಿಂದ ಕಳವು ಮಾಡಿರುವ ರಾಸುಗಳನ್ನು ಕಲಬುರಗಿ, ರಾಯಚೂರು ಸೇರಿದಂತೆ ಹೈದರಾಬಾದ್ ನಗರಕ್ಕೆ ಸಾಗಿಸುತ್ತಿದ್ದಾರೆ. ಸೂಕ್ತ ಕ್ರಮ ವಹಿಸಬೇಕು ಎಂದು ರೈತ ಮುಖಂಡ ಚನ್ನಾರೆಡ್ಡಿ ಪಾಟೀಲ ಗುರುಣಸಗಿ ಹೇಳುತ್ತಾರೆ.
‘ಈಚೆಗೆ ನಮ್ಮ ಹಸು ಕಳ್ಳತನವಾಯಿತು. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನನಗೆ ಹಸು ಕೂಡ ಸಿಗಲಿಲ್ಲ. ಹೀಗಾಗಿ ಯಾರಿಗೆ ದೂರು ನೀಡೋಣ’ ಎಂದು ಸಹಾಯಕತೆ ವ್ಯಕ್ತಪಡಿಸುತ್ತಾರೆ ಅವರು.
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಬಿಡಾಡಿ ದನಗಳನ್ನು ಬೊಲೊರೊ ವಾಹನದಲ್ಲಿ ತುಂಬಿಕೊಂಡು ತೆರಳುತ್ತಿರುವ ಘಟನೆಗಳು ನಡೆಯುತ್ತಿವೆ. ಕೊಟ್ಟಿಗೆಯಲ್ಲಿ ಜಾನುವಾರ ಬೆಳಿಗ್ಗೆ ಕಾಣುತ್ತಿಲ್ಲ. ಮೊದಲೇ ಬರ ಇದ್ದು, ಕಳ್ಳತನ ಮತ್ತಷ್ಟು ಆತಂಕ ಸೃಷ್ಟಿಸಿದೆ. ಕೂಡಲೇ ಪೊಲೀಸರು ಕ್ರಮ ವಹಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.