ಕಕ್ಕೇರಾ: ಪಟ್ಟಣ ಸೇರಿದಂತೆ ವಲಯದ ತಿಂಥಣಿ, ದೇವಾಪುರ, ದೇವತ್ಕಲ್, ಆಲ್ದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ವಾರ ಬಿತ್ತಿದ್ದ ಸಜ್ಜೆ, ಶೇಂಗಾ, ಹತ್ತಿ, ಸಜ್ಜೆ ಬೆಳೆಗಳು ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋದರೆ, ಹಲವು ಕಡೆಗಳಲ್ಲಿ ನೆಲಕ್ಕಚ್ಚಿವೆ.
ಬುಧವಾರ ಮಧ್ಯರಾತ್ರಿಯಿಂದ ಮತ್ತು ಗುರುವಾರ ಬೆಳಗಿನ ಜಾವದವರೆಗೆ 95.4 ಎಂಎಂ ಸುರಿದ ಭಾರೀ ಮಳೆಗೆ ಬೆಳೆಗಳ ಸಮೇತ ಜಮೀನುಗಳ ಬದುಗಳು, ಮನೆಗಳು ಬಿದ್ದು ಹೋಗಿವೆ. ಅಪಾರ ಹಾನಿಯಾಗಿದೆ. ಪೀರಗಾರದೊಡ್ಡಿ, ನಿಂಗಾಪುರ, ಮಂಜಲಾಪುರ, ರಾಯಗೇರಾ, ಜಮೀನುಗಳಲ್ಲಿನ ಒಡ್ಡು(ಬದು)ಗಳಲ್ಲಿ ನೀರು ನಿಂತಿದೆ.
ಸಮೀಪದ ಹುಣಸಿಹೊಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ಮತ್ತು ಗ್ರಾಮದ ಚರಂಡಿಯ ನೀರು ಶಾಲಾ ಆವರಣದೊಳಗೆ ನುಗ್ಗಿದ್ದರಿಂದ ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಪಟ್ಟಣದಿಂದ ಶಾಂತಪುರ ಕ್ರಾಸ್ ಮಾರ್ಗದ ಹಾಳಾದ ರಸ್ತೆಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.
ನಿಂಗಾಪುರದಲ್ಲಿ 3 ಮನೆಗಳು ಧರೆಗೆ ಉರುಳಿದ್ದು, ಹುಣಸಿಹೊಳೆ ಗ್ರಾಮದಲ್ಲಿ 2 ಮನೆಗಳು ಬಿದ್ದು, 3 ಮನೆಗಳ ಗೋಡೆಗಳ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿವೆ.
ಹುಣಸಿಹೊಳೆ ಕಣ್ವ ಮಠ ಸಮೀಪದ ನಮ್ಮ ಜಮೀನುಗಳಲ್ಲಿ ಭತ್ತದ ಗದ್ದೆಯ ಜಮೀನುಗಳ ಬದುವು 4 ಎಕರೆ ಸಂಪೂರ್ಣ ಕಿತ್ತುಹೋಗಿದೆ ಎಂದು ರೈತ ನಿಂಗಪ್ಪ ಕಾಂಬಳೆ ತಿಳಿಸಿದರು.
ಸಮೀಪದ ಪೀರಗಾರದೊಡ್ಡಿ ಹಳ್ಳವು ತುಂಬಿ ಹರಿಯುತ್ತಿದೆ.
ಪಟ್ಟಣ ಸೇರಿದಂತೆ ವಿವಿಧ ಕಡೆ 95.4 ಎಂಎಂ ಮಳೆಯಾಗಿದ್ದು, ರೈತರ ಬೆಳೆಹಾನಿ ಹಾಗೂ ಮನೆಹಾನಿಯಾಗಿದ್ದು, ಸಮೀಕ್ಷೆ ಕಾರ್ಯ ಮುಗಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಗ್ರಾಮಲೆಕ್ಕಾಧಿಕಾರಿ ಸಂತೋಷ ರೆಡ್ಡಿ ತಿಳಿಸಿದರು.
ಹೊಲದಲ್ಲಿನ ಬೆಳೆ ಹಾಳಾಗಿದೆ. ಹೊಲದ ಬದುವು ಕಿತ್ತುಕೊಂಡು ಹೋಗಿದೆ. ಸರ್ಕಾರ ಪರಿಹಾರ ನೀಡಲಿ ಎಂದು ಹುಣಸಿಹೊಳೆ ರೈತ ಗಂಗಣ್ಣ ಕಾಂಬಳೆ ಒತ್ತಾಯಿಸಿದರು.