ಹುಣಸಗಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಎನ್ಪಿಎಸ್ ನೌಕರರ ಸಂಘದ ಮಹಿಳಾ ನೌಕರರು ಶಾಸಕ ರಾಜೂಗೌಡ ಅವರಿಗೆ ರಾಖಿ ಕಟ್ಟಿ ಹೊಸ ಪಿಂಚಣೆ ಯೋಜನೆ ರದ್ದತಿಗೆ ಶಾಸಕಾಂಗ ಸಭೆ ಹಾಗೂ ಅಧಿವೇಶನದಲ್ಲಿ ಒತ್ತಾಯಿಸುವಂತೆ ವಿನಂತಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎನ್ಪಿಎಸ್ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಮಹ್ಮದ ರಫೀ ಮಳ್ಳಿಕರ ಮಾತನಾಡಿ, ಸರ್ಕಾರಿ ನೌಕರರು 2006 ಏಪ್ರಿಲ್ 1ರ ನಂತರ ಸರ್ಕಾರಿ ನೌಕರರಿಗೆ ಸೇರಿದ ನಮ್ಮೆಲ್ಲರಿಗೂ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದು ಪ್ರತಿ ತಿಂಗಳು ನಮ್ಮ ವೇತನದಿಂದ ಶೇ 10 ರಷ್ಟು ವಂತಿಕೆ ಕಟಾಯಿಸಲಾಗುತ್ತಿದೆ. ಆ ಹಣಕ್ಕೆ ಶೇ 14 ರಷ್ಟು ಸರ್ಕಾರ ಸೇರಿಸಿ ಒಟ್ಟು ಶೇ 24 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿದ ನಮ್ಮ ಹಣಕ್ಕೆ ಯಾವುದೇ ರೀತಿಯ ಭದ್ರತೆ ಇರುವದಿಲ್ಲ. ಹಾಗಾಗಿ ನಿಶ್ಚಿತ ಹಳೆ ಪಿಂಚಣಿ ವ್ಯವಸ್ಥೆಯನ್ನು ಎಲ್ಲಾ ಎನ್ಪಿಎಸ್ ನೌಕರರಿಗೂ ಜಾರಿಗೊಳಿಸಿ ಹೊಸ ಪಿಂಚಣಿ ವ್ಯವಸ್ಥೆಯಿಂದ ರಕ್ಷಿಸಬೇಕಿದೆ. ಈ ಕುರಿತು ವಿಧಾನ ಸಭೆ ಅಧಿವೇಶನ ಹಾಗೂ ಶಾಸಕಾಂಗ ಸಭೆಯಲ್ಲಿ ಎನ್ಪಿಎಸ್ ನೌಕರರ ಹಿತ ಕಾಪಾಡುವಂತೆ ಒತ್ತಾಯಿಸಬೇಕು ಎಂದು ಮನವಿ ಮಾಡಿಕೊಂಡರು.
ಎನ್ಪಿಎಸ್ ನೌಕರರ ಸಮಸ್ಯೆಯನ್ನು ಆಲಿಸಿದ ಶಾಸಕ ರಾಜುಗೌಡ ಮಾತನಾಡಿ, 'ಮೂರು ದಶಕಗಳ ದುಡಿಮೆಯ ನಂತರವೂ ಪಿಂಚಣಿಯ ಭದ್ರತೆ ಇಲ್ಲದಿರುವದು ನೋವಿನ ಸಂಗತಿಯಾಗಿದೆ. ಈ ಕುರಿತಂತೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಖಂಡಿತವಾಗಿಯೂ ಸಂಪೂರ್ಣ ವಿವರಗಳೊಂದಿಗೆ ಚರ್ಚಿಸಿ ಸಹೋದರಿಯರಿಗೆ ರಕ್ಷಾ ಬಂಧನದ ಉಡುಗೊರೆಯನ್ನು ನೀಡುವುದಾಗಿ ಭರವಸೆ ನೀಡಿದರು.
ಸಂಘದ ಪದಾಧಿಕಾರಿಗಳಾದ ವೀರೇಶ ಹಡಪದ, ಗುರುರಾಜ ಜೋಷಿ ಕೊಡೇಕಲ್ಲ, ಅಕ್ಕಮಹಾದೇವಿ ದೇಶಮುಖ, ಶಿರಾನ ಕೌಸರ್, ಸವಿತಾ ಬೆಳ್ಳಿ, ಶಿವಲೀಲಾ, ಉಮಾದೇವಿ ವಠಾರ, ತಿಪ್ಪಮ್ಮ, ಬಸವರಾಜೇಶ್ವರಿ, ನೀಲಗಂಗಮ್ಮ, ಗೀತಾ ಅರನಾಳ, ಶೈಲಾಶ್ರೀ ದೇಸಾಯಿ, ಮಲ್ಲು ವಾಲಿಕರ, ಶಿವಾನಂದ ತೋಟದ, ಕಾಸಿಂಸಾಬ ಸೊಲ್ಲಾಪೂರ, ದೇವಪ್ಪ ಕುರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.