ಹೊರಗುತ್ತಿಗೆ ಹುದ್ದೆ ನೀಡಲು ಸೂಚನೆ

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಮಕ್ಕಳೊಂದಿಗೆ ಭೀಮರಾಯ ಸುರಪುರ ದಂಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಿಲ್ಲಾಡಳಿತ ಮಾನವೀಯತೆ ತೋರಿದೆ. ಭೀಮರಾಯ ಕುಟುಂಬದಲ್ಲಿ ಉಳಿದಿರುವ ಏಕೈಕ ಮಗಳು ಚಂದ್ರಕಲಾ ಅವರನ್ನು ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಪಾಯಿ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಗಪ್ರಿಯಾ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದ್ದಾರೆ.
ಶಹಾಪುರ ನಗರಸಭೆಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೀಡಿರುವ ‘ಪೂಜಾ ಲೇಬರ್ ಕಾಂಟ್ರ್ಯಾಕ್ಟರ್’ ಮಾಲೀಕರಿಗೆ ತಕ್ಷಣವೇ ದೋರನಹಳ್ಳಿ ಗ್ರಾಮದ ಚಂದ್ರಕಲಾ ಭೀಮರಾಯ ಸುರಪುರ ಅವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ನಗರಸಭೆಯಲ್ಲಿ ಸಿಪಾಯಿ ಹುದ್ದೆಗೆ ನಿಯೋಜಿಸುವಂತೆ ಜಿಲ್ಲಾಧಿಕಾರಿ ಆದೇಶದಂತೆ ಸೂಚಿಸಲಾಗಿದೆ. ಇನ್ನೆರಡು ದಿನದಲ್ಲಿ ತಾತ್ಕಾಲಿಕ ನೇಮಕಾತಿ ಆದೇಶ ನೀಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ರಮೇಶ ಪಟ್ಟೆದಾರ ತಿಳಿಸಿದರು.
ಚಂದ್ರಕಲಾ ಅವರನ್ನು ಕೇವಲ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡರೆ ಸಾಲದು ನಗರಸಭೆಯಲ್ಲಿ ಖಾಯಂ ಹುದ್ದೆ ನೀಡಿ ಬದುಕಿಗೆ ಭದ್ರತೆ ನೀಡಬೇಕು ಎಂದು ಕೃಷಿಕೂಲಿ ಕಾರ್ಮಿಕ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ದಾವಲಸಾಬ್ ನದಾಫ್ ಮನವಿ ಮಾಡಿದ್ದಾರೆ.
ಹಿನ್ನೆಲೆ: ಗ್ರಾಮದ ಭೀಮರಾಯ ಸುರಪುರ ದಂಪತಿಯ ಐವರು ಮಕ್ಕಳಲ್ಲಿ ಚಂದ್ರಕಲಾ ಹಿರಿಯ ಮಗಳು. ಮೇ 21ರಂದು ಸಗರ ಗ್ರಾಮದ ವರನಿಗೆ ಮದುವೆ ಮಾಡಿಕೊಟ್ಟಿದ್ದರು. ಜೂನ್ 28 ರಂದು ನಾಲ್ಕು ಮಕ್ಕಳೊಂದಿಗೆ ಭೀಮರಾಯ ದಂಪತಿ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಭೀಮರಾಯನ ಕುಟುಂಬದಲ್ಲಿ ಉಳಿದಿರುವ ಏಕೈಕ ಮಗಳು ಚಂದ್ರಕಲಾ ಆಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.