ಶಹಾಪುರ:ಬಿಸಿಲು ಹಾಗೂ ಚಳಿಯನ್ನು ಮಾತ್ರ ಅನುಭವಿಸುತ್ತಿದ್ದ ಇಲ್ಲಿಯ ಜನ ಈಗ ಮಲೆನಾಡ ಸೊಬಗನ್ನು ಸವಿಯುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಇಲ್ಲಿನ ಬೆಟ್ಟಗಳಲ್ಲಿಯ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಕೊರೊನಾದಿಂದ ಮಾನಸಿಕವಾಗಿ ಜರ್ಜರಿತವಾದ ಮನಸ್ಸುಗಳಿಗೆ ಇವು ನೆಮ್ಮದಿ ನೀಡುತ್ತಿವೆ.
ಶಹಾಪುರ ತಾಲ್ಲೂಕಿನಲ್ಲಿ ಜುಲೈ ಮೊದಲ ವಾರದಲ್ಲಿ ಒಂದೇ ರಾತ್ರಿ 300 ಮಿ.ಮೀ ಮಳೆ ಸುರಿಯಿತು. ಮಳೆ ಮಾಪನ ಕೇಂದ್ರದ ದಾಖಲೆಯನ್ನೂ ಸಂಶಯದಿಂದ ನೋಡುವಷ್ಟು ವರ್ಷಧಾರೆಯಾಯಿತು. ರಾತ್ರೋರಾತ್ರಿ ನಗರದ ಹೃದಯ ಭಾಗದಲ್ಲಿರುವ ಮಾವಿನ ಹಾಗೂ ನಾಗರ ಕೆರೆಗಳು ಮೈದುಂಬಿಕೊಂಡು ನಿಂತವು.
‘ನಗರಕ್ಕೆ ಹೊಂದಿಕೊಂಡು ನೈಸರ್ಗಿಕ ತಡೆಗೋಡೆಯಂತೆ ಇರುವ ಬೆಟ್ಟದ ಮೇಲಿಂದ ಇಳಿದು ಅಲ್ಲಲ್ಲಿ ಟಿಸಿಲೊಡೆದು ಬರುವ ಹಾಲ್ನೊರೆಯಂಥ ನೀರಿನ ಸೊಬಗು ಮನಸ್ಸಿಗೆ ಎಲ್ಲಿಲ್ಲದ ಖುಷಿ ನೀಡುತ್ತದೆ’ ಎನ್ನುತ್ತಾರೆ ನಗರದ ನಿವಾಸಿ ಸಂತೋಷ ಸತ್ಯಂಪೇಟೆ.
ಸಿದ್ದಲಿಂಗೇಶ್ವರ ಬೆಟ್ಟ, ತಾವರೆ ಕೊಳ, ಮುಂದಾಕಿನ ಕೊಳ, ನಿಸರ್ಗದ ಮಡಲಲ್ಲಿ ಬುದ್ದ ಮಲಗಿದ ಬೆಟ್ಟದ ಸಾಲಿನಲ್ಲಿ ಹರಿದು ಬರುವ ಜೋಗದ ಸಿರಿಯ ಅಂದ ನೀಡುವ ಜಲಪಾತ. ಸದಾ ಕಲ್ಲು ಬಂಡೆಗಳೇ ಕಾಣುತ್ತಿದ್ದ ಬೆಟ್ಟ ಈಗ ಹಸಿರುಟ್ಟು ನಿಂತಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅರವಿಂದ ಉಪ್ಪಿನ.
ಇಂಥ ಅಪರೂಪದ ನಿಸರ್ಗದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಭಾನುವಾರ ಇನ್ನಷ್ಟು ಜನ ಲಗ್ಗೆ ಇಡಲಿದ್ದಾರೆ. ಕಳೆದ 15 ವರ್ಷದಿಂದ ಇಂಥ ನಿಸರ್ಗದ ಸೊಬಗು ನೋಡಿರಲಿಲ್ಲ. ಈಗ ಲಭಿಸಿದೆ. ಎಲ್ಲರೂ ನಿರ್ಗಸದ ಸವಿಯನ್ನು ಸವಿಯೋಣ ಎನ್ನುತ್ತಾರೆ ನಗರದ ಜನತೆ.