ಸೈದಾಪುರ: ‘ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗುವುದಿಲ್ಲ. ಆತಂಕ ಪಡುವ ಅಗತ್ಯವಿಲ್ಲ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತ್ಯ ಪ್ರಸಾದ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಕೋವಿಶಿಲ್ಡ್ ಲಸಿಕೆ ನೀಡುವ ಮೂಲಕ ಎರಡನೇ ಹಂತದ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕೊರೊನಾವನ್ನು ತಡೆಯಲು ಪ್ರತಿಯೊಬ್ಬರೂ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದಾರೆ. ಸಾಕಷ್ಟು ಸಿಬ್ಬಂದಿ ಕುಟುಂಬದಿಂದ ದೂರವಿದ್ದು, ಜನಸಾಮಾನ್ಯರ ನೆರವಿಗಾಗಿ ಹಗಲಿರಳು ದುಡಿದಿದ್ದಾರೆ. ಹೀಗಾಗಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡುತ್ತಿರುವುದರಿಂದ ಸಂತಸವಾಗುತ್ತಿದೆ’ ಎಂದರು.
ಲಸಿಕೆ ಪಡೆದ ಇಲ್ಲಿನ ಪೊಲೀಸ್ ಠಾಣೆ ಪಿಎಸ್ಐ ಭೀಮರಾಯ ಬಂಕ್ಲಿ ಮಾತನಾಡಿ,‘ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ’ ಎಂದರು.
ಪೊಲೀಸ್ ಸಿಬ್ಬಂದಿಗೆ ಲಸಿಕೆ ನೀಡಿ 30 ನಿಮಿಷಗಳ ಕಾಲ ನಿಗಾವಹಿಸಲಾಗಿತ್ತು. ಅಡ್ಡ ಪರಿಣಾಮಗಳು ಕಂಡುಬರಲಿಲ್ಲ ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ, ಹಿರಿಯ ಆರೋಗ್ಯ ಸಹಾಯಕಿ ಯಶೋಧ, ಶಿಬಾ ಸುಹಾಸಿನಿ, ಕವಿತಾ, ನಾಗವೇಣಿ, ನಿಖಿತಾ, ಗೀತಾ, ಶಿವಕುಮಾರ, ದುರ್ಗಪ್ಪ, ಪ್ರಸಾದ್, ಪ್ರಶಾಂತ ಹಾಗೂ ವಜೀರ್ ಇದ್ದರು.