ಯಾದಗಿರಿ: ರಾಯಚೂರು ಲೋಕಸಭೆ, ಸುರಪುರ ಉಪಚುನಾವಣೆ ಮೇ 7ರಂದು ನಡೆದಿದ್ದು, ಚುನಾವಣೆಯ ಅಕ್ರಮ ಚಟುವಟಿಕೆಯಲ್ಲಿ ಅಬಕಾರಿ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.
ಮತದಾರರಿಗೆ ಆಮಿಷ ತೋರಿಸಲು ರಾಜಕೀಯ ಮುಖಂಡರು ಮದ್ಯ ಸಂಗ್ರಹ ಮಾಡಿಕೊಂಡಿದ್ದರು. ಅಕ್ರಮ ಮಾರಾಟವನ್ನು ತಡೆಗಟ್ಟಲು ಹದ್ದಿನ ಕಣ್ಣಿಟ್ಟಿದ್ದ ಅಬಕಾರಿ ಇಲಾಖೆ ಜಿಲ್ಲೆಯ ವಿವಿಧೆಡೆ ಪ್ರತಿದಿನವೂ ದಾಳಿ ಮಾಡಿ ವಶಪಡಿಸಿಕೊಂಡಿತ್ತು.
ಲೋಕಸಭಾ ಅಂಗವಾಗಿ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾಗಿತ್ತು. ಚುನಾವಣೆಗಾಗಿ ಅಬಕಾರಿ ಇಲಾಖೆ ಚುರುಕುಕೊಂಡು ದಾಳಿಗಳನ್ನು ಮಾಡಿತ್ತು. ಅಬಕಾರಿ ಇಲಾಖೆಯಲ್ಲಿ ಘೋರ, 15 (ಎ), ಬಿಎಲ್ಸಿ ಎಂದು ಪ್ರಕರಣಗಳನ್ನು ದಾಖಲಿಸಲಾಗಿದೆ. ಉಳಿದಂತೆ ಪೊಲೀಸ್ ಇಲಾಖೆ ಸಂಚಾರಿ ವಿಚಕ್ಷಣ ದಳ (ಎಫ್ಎಸ್ಟಿ), ಅಬಕಾರಿ ಇಲಾಖೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದೆ. ಆದರೆ, ಕ್ಷಿಪ್ತ ಸಂಚಾರಿ ದಳ (ಎಸ್ಎಸ್ಟಿ) ಪ್ರಕರಣ ದಾಖಲಿಸಿಲ್ಲ.
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ 32, ಎಫ್ಎಸ್ಟಿ 13, ಅಬಕಾರಿ ಇಲಾಖೆಯಿಂದ 795 ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಬಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ಚುನಾವಣೆಯಲ್ಲಿ ಹೆಚ್ಚಾಗಿದ್ದವು.
ಬೈಕ್ ಮೇಲೆ ಸಾಗಣೆ: ಅಬಕಾರಿ ಪ್ರಕರಣಗಳಲ್ಲಿ ಬೈಕ್ ಮೇಲೆ ಅಕ್ರಮ ಮದ್ಯ ಸಾಗಣೆ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಟೆಟ್ರಾ ಪ್ಯಾಕ್, ಕಳ್ಳಬಟ್ಟಿ ಕೇಸ್ಗಳು ಹೆಚ್ಚಾಗಿವೆ.
ಜಿಲ್ಲೆಯ ಕೆಲ ಗ್ರಾಮ, ತಾಂಡಾಗಳಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರ ಪರಿಣಾಮ ಜನರು ಅನಾರೋಗ್ಯಕ್ಕೆ ತುತ್ತಾಗಿ ಪರದಾಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಆಗಾಗ ಗ್ರಾಮ, ತಾಂಡಾಗಳಿಗೆ ತೆರಳಿ ಪರಿಶೀಲನೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಭಯದಿಂದ ಕೆಲವರು ಕಳ್ಳಬಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಕಳ್ಳಬಟ್ಟಿ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ, ಇನ್ನೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿ ಸಾವು-ನೋವುಗಳ ಘಟನೆಗಳು ಹೆಚ್ಚಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಸುರಪುರ ಉಪಚುನಾವಣೆ ಅಂಗವಾಗಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಹಾಯವಾಗಿದೆಶರಣಬಸಪ್ಪ ಕೋಟೆಪ್ಪಗೋಳ ಹೆಚ್ಚುವರಿ ಜಿಲ್ಲಾಧಿಕಾರಿ
ಅಬಕಾರಿ ಇಲಾಖೆ ಪ್ರಕರಣಗಳು ಘೋರ ಪ್ರಕರಣಗಳು:98 15 (ಎ):656 ಬಿಎಲ್ಸಿ; 41 ಒಟ್ಟು;795
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.