ಸುರಪುರ: ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಬುಧವಾರ ಶಾರ್ಟ್ ಸರ್ಕಿಟ್ನಿಂದ ಮನೆ ಬೆಂಕಿಗೆ ಆಹುತಿಯಾಗಿದೆ.
ಮನೆಯಲ್ಲಿಟ್ಟಿದ್ದ 5 ತೊಲೆ ಬಂಗಾರ, ಅರ್ಧ ಕೆ.ಜಿ ಬೆಳ್ಳಿ, 8.50 ಲಕ್ಷ ನಗದು ಹಣ ಹಾಗೂ ದವಸ ಧಾನ್ಯ ಬಟ್ಟೆ ಬರೆ ಸೇರಿದಂತೆ ದಿನಬಳಕೆ ಅಗತ್ಯ ಸಾಮಗ್ರಿಗಳು ಸುಟ್ಟು ಕರಕಲಾಗಿ ಹೋಗಿವೆ.
ಮನೆಯ ಮಾಲೀಕ ಇಮಾಮಸಾಬ ದಾವಲಸಾಬ ದೊಡ್ಮನಿ ಮನೆಗೆ ಕೀಲಿ ಹಾಕಿಕೊಂಡು ಕುಟುಂಬ ಸಮೇತ ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ಆ ಸಮಯದಲ್ಲಿ ಶಾರ್ಟ್ ಸರ್ಕಿಟ್ನಿಂದ ಮನೆಗೆ ಬೆಂಕಿ ತಗಲಿದೆ ಎನ್ನಲಾಗಿದೆ.
10 ಕ್ವಿಂಟಾಲ್ ಜೋಳ, 2 ಚೀಲ ಸಜ್ಜಿ, 6 ಚೀಲ ಅಕ್ಕಿ, ಗೋಧಿ ಎಲ್ಲವು ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಗ್ರೇಡ್ 2 ತಹಶೀಲ್ದಾರ್ ಸೋಫಿಯಾ ಸುಲ್ತಾನ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.