ಯರಗೋಳ: ಇಲ್ಲಿಗೆ ಸಮೀಪದ ಕಂಚಗಾರಹಳ್ಳಿ ತಾಂಡಾದಲ್ಲಿ ಬುಧವಾರ ಮಧ್ಯಾಹ್ನ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಜೋರು ಮಳೆಗೆ, ರಸ್ತೆ ಬದಿ, ಹೊಲಗಳಲ್ಲಿನ ಮರಗಳು ನೆಲಕ್ಕೆ ಅಪ್ಪಳಿಸಿವೆ.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಪ್ರಿಯಾಂಕಾ ಎನ್ನುವವರಿಗೆ ಮನೆಯ ಮೇಲಿನ ಪತ್ರಾಸ್ ಬಿದ್ದು, ತಲೆಗೆ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಯಲಲ್ಲಿ ಕಟ್ಟಿದ ಎತ್ತಿನ ತಲೆಗೆ ಗಾಯವಾಗಿದೆ. ತಾಂಡಾ ನಿವಾಸಿಗಳಾದ ಜೈಸಿಂಗ್, ನಾಮದೇವ್ ಎನ್ನುವ ವ್ಯಕ್ತಿಗಳ ಮನೆಯ ಪತ್ರಾಸ್ಗಳು ಹಾರಿ ಹೋಗಿವೆ. ಬೃಹದ್ಕಾರದ ಬೇವಿನ ಮರಗಳು ಮನೆ ಮೇಲೆ ಬಿದ್ದು, ಗೋಡೆಗಳು ಬಿರುಕು ಬಿಟ್ಟಿವೆ ಎಂದು ಪ್ರತ್ಯಕ್ಷದರ್ಶಿ ಅಲ್ಲಿಪುರ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಪತ್ತು ಮತ್ತು ಗ್ರಾಮದ ಚಂದ್ರಕಾಂತ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಜೋರು ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸದೆ ಇರುವುದರಿಂದ ಬೈಕ್, ವಾಹನ, ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗಿದೆ.