ಸುರಪುರ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬರುತ್ತಿದೆ. ಶನಿವಾರ ಸಂಜೆ ಶುರುವಾದ ಮಳೆ ಭಾನುವಾರ ಸಂಜೆವರೆಗೂ ಸುರಿಯಿತು. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಸತ್ಯಂಪೇಟ, ಕರ್ನಾಳ, ರಂಗಂಪೇಟೆ, ದೇವರಗೋನಾಲ, ಚಿಗರಿಹಾಳ ಗ್ರಾಮಗಳಲ್ಲಿ ಮನೆಗಳು ಕುಸಿತ ಗೊಂಡಿದ್ದು, ಕೆಲವೆಡೆ ಗೋಡೆ ಬಿದ್ದಿರುವ ಬಗ್ಗೆ ವರದಿಯಾಗಿವೆ.
ತಿಮ್ಮಾಪುರದ ಕಿಶನರಾವ ಪತಂಗೆ ಅವರ ಮನೆ ಕುಸಿದಿದೆ. ಈಗಾಗಲೇ ಮನೆಯ ಯಜಮಾನನನ್ನು ಕಳೆದುಕೊಂಡಿರುವ ಈ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು ದುಡಿಯು ವರಿಲ್ಲದ ಕಾರಣ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪಕ್ಕದ ಮನೆಯ ವರು ಸದ್ಯಕ್ಕೆ ಆಶ್ರಯ ನೀಡಿದ್ದಾರೆ.
ಸುರಪುರ ವಲಯದಲ್ಲಿ 45.6 ಮಿ.ಮೀ, ಕಕ್ಕೇರಾ 60.2 ಮಿ.ಮೀ, ಕೊಡೇಕಲ್ 33.2 ಮಿ.ಮೀ, ನಾರಾಯಣಪುರ 36.8 ಮಿ.ಮೀ ಹಾಗೂ ಕೆಂಭಾವಿಯಲ್ಲಿ 38.8 ಮಿ.ಮೀ ಮಳೆ ಸುರಿದಿದೆ. ನಿರಂತರ ಸುರಿದ ಮಳೆಯಿಂದ ಜನರು ಮನೆಯಿಂದ ಹೊರಗೆ ಬರಲಿಲ್ಲ. ಮಳೆಯ ಜೊತೆಗೆ ತಣ್ಣನೆಯ ಗಾಳಿಯೂ ಬೀಸುತ್ತಿರುವುದರಿಂದ ಹೊರಬಾರದಂತಾಗಿದೆ.
ಮಳೆಯಾಶ್ರಿತ ಶೇ 60ರಷ್ಟು ಜಮೀನಿನಲ್ಲಿ ರೈತರು ಶೇಂಗಾ, ಸೂರ್ಯಕಾತಿ, ಸಜ್ಜಿ, ಹೆಸರು, ತೊಗರಿ ಸೇರಿದಂತೆ ಇತರೆ ಬೀಜ ಬಿತ್ತುತ್ತಾರೆ. ಮಳೆ ಕೊರತೆಯಿಂದ ಇನ್ನೂ ಕೆಲವೆಡೆ ಬಿತ್ತನೆ ಕಾರ್ಯ ಸ್ಥಗಿತಗೊಂಡಿತ್ತು. ಎರಡು ದಿನಗಳಿಂದ ಬಿ ದ್ದಿರುವ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಹೆಚ್ಚಿನ ಅನುಕೂಲವಾಗಿದೆ.
ಭತ್ತ ನಾಟಿಗಾಗಿ ಕೆಲ ರೈತರು ನೀರಿನ ಮೂಲವಿಲ್ಲದೆ ಕಂಗಾಲಾಗಿದ್ದರು. ಅಲ್ಲದೆ ಕಾಲುವೆಗಳಿಗೆ ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟಿರಲಿಲ್ಲ. ಕಾಲುವೆ ನೀರಿನ ಹಾದಿ ನೋಡುತ್ತಿದ್ದ ರೈತರಿಗೆ ಮಳೆ ಸುರಿದಿರುವುದು ವರದಾನವಾಗಿದೆ. ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಉತ್ತಮ ಮಳೆಗೆ ವಿವಿಧ ಗ್ರಾಮಗಳಲ್ಲಿನ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಜನ, ಜಾನುವಾರುಗಳಿಗೆ ನೀರಿನ ಬವಣೆ ತಪ್ಪಿದೆ. ಜಲಮೂಲ ಹೆಚ್ಚಾಗಿದೆ. ಕೊಳವೆಬಾವಿಗಳಲ್ಲಿಯೂ ನೀರಿನ ಪ್ರಮಾಣ ಅಧಿಕವಾಗಿದೆ.
‘ಮಳೆ ಹಾನಿ ಬಗ್ಗೆ ಯಾವುದೇ ವರದಿ ಬಂದಿಲ್ಲ. ಉತ್ತಮ ಮಳೆಯಾಗುತ್ತಿದ್ದು, ಮನೆಗಳು ಕುಸಿದಿರುವ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮನೆ ಕಳೆದುಕೊಂಡವರಿಗೆ ಪ್ರಕೃತಿ ವಿಕೋಪದಡಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಪರಿಹಾರ ನೀಡಲಾ ಗುವುದು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.