ಹುಣಸಗಿ: ತಾಲ್ಲೂಕಿನ ಕನ್ನೇಳ್ಳಿ ಗ್ರಾಮದಲ್ಲಿ ಮನೆಯಲ್ಲಿಯೇ ಪ್ರತ್ಯೇಕ ವಾಸವಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಅವರ ಮನೆಗೆ ಹುಣಸಗಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಸೋಂಕಿತ ವ್ಯಕ್ತಿಗಳು ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಯವರು ಜಾಗ್ರತೆ ವಹಿಸಬೇಕು. ಆರೋಗ್ಯದಲ್ಲಿ ಉಸಿರಾಟದಲ್ಲಿ ಏರುಪೇರಾದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಆಗಮಿಸಬೇಕು ಎಂದು ತಿಳಿಸಿದರು.
ಪರಶುರಾಂ (30) ಎಂಬುವರೇ ಮೃತಪಟ್ಟಿದ್ದು, ಅವರ ಮನೆ ಹಾಗೂ ಮನೆಯ ಸುತ್ತಮುತ್ತಲಿರುವ ಮನೆಗಳ ಜನರು, ಪ್ರಾಥಮಿಕ ಸಂಪರ್ಕದಲ್ಲಿರುವವರು ಕಡ್ಡಾ ಯವಾಗಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿದರು.
ಅಲ್ಲದೇ, ಈಗಾಗಲೇ ಕೋವಿಡ್ 2ನೇ ಅಲೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಅನಗತ್ಯ ಹೊರಗಡೆ ಸಂಚಾರ ಮಾಡದೆ ಮನೆಯಲ್ಲಿಯೇ ಇರಿ. ಸೋಂಕಿತ ವ್ಯಕ್ತಿಗಳು ಮನೆಯಿಂದ ಹೊರಗೆ ಸಂಚರಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಅಂತವರು ಹೊರ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಣ್ಣಯ್ಯ ಉಮಚಗಿಮಠ ಮಾತನಾಡಿ, ಈಗಾಗಲೇ ಕನ್ನೇಳ್ಳಿ ಗ್ರಾಮದಲ್ಲಿ ಎಲ್ಲೆಡೆ ಸೋಂಕು ನಿವಾರಕ ದ್ರಾವಣ ಸಿಂಪರಣೆ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಗಳು ಇರುವ ಮನೆಗಳ ಬಳಿ ಇನ್ನೋಮ್ಮೆ ಮತ್ತೆ ಸಿಂಪರಣೆ ಮಾಡಲು ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಕನ್ನೇಳ್ಳಿ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಬಹುತೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.