ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹೆಗ್ಗನದೊಡ್ಡಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶುಕ್ರವಾರ ಇಬ್ಬರು ಹೆಣ್ಣುಮಕ್ಕಳಿಗೆ ಕಲ್ಪಿತ ವಿವಾಹ ಮಾಡಿ ಗ್ರಾಮಸ್ಥರು ಸಸಿ ಆಡುವ ಹಬ್ಬ ಆಚರಿಸಿದರು.
ದೊಡ್ಡವರಿಗೆ ವಿವಾಹ ಮಾಡುವಂತೆ ಶಾಸ್ತ್ರೋಕ್ತವಾಗಿ ನಿಯಮಗಳನ್ನು ಪಾಲಿಸಿದರು. ವಧು ವರರಿಗೆ ಸ್ನಾನ ಮುಂತಾದ ಕಾರ್ಯಕ್ರಮಗಳನ್ನು ಮಾಡಿದರು. ಕೈಗೆ ಕಂಕಣ ಕಟ್ಟಿ ವಿವಾಹದ ಕಾರ್ಯ ನೆರವೇರಿಸಿದರು.
ಕಾರ ಹುಣ್ಣಿಮೆ ರೈತರ ಹಬ್ಬವಾಗಿದೆ. ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ ನಂತರ ಮೆರವಣಿಗೆ ನಡೆಸುವುದು ಸಂಪ್ರದಾಯ. ಆದರೆ, ಹೆಗ್ಗನದೊಡ್ಡಿ ಗ್ರಾಮದಲ್ಲಿ ಹುಣ್ಣಿಮೆ ಮರುದಿನ ಮಕ್ಕಳು ಸಸಿ ಹಬ್ಬ ಆಚರಿಸುವುದು ವಿಶೇಷವಾಗಿದೆ. ಹಿರಿಯರು ಮಕ್ಕಳಿಗೆ ಕಲ್ಪಿತ ಮದುವೆ ಮಾಡಿ ಸಂಭ್ರಮಿಸಿದರು. ಇದಕ್ಕಾಗಿ 15 ದಿನಗಳ ಮುಂಚೆಯೇ ಸಿದ್ಧತೆಗಳನ್ನು ನಡೆಸಿದ್ದರು. ತೆಂಗಿನ ಚಿಪ್ಪುಗಳಲ್ಲಿ ಬೆಳೆಸಿದ ವಿವಿಧ ಧಾನ್ಯಗಳ ಸಸಿಗಳನ್ನು ಶುಕ್ರವಾರ ಊರ ಮುಂದಿನ ಹಳ್ಳ, ಕೆರೆ, ನದಿ ಹಾಗೂ ಬಾವಿಗಳಿಗೆ ತೆರಳಿ ಪೂಜೆ ಸಲ್ಲಿಸಿ ಮಕ್ಕಳ ಮದುವೆ ನೆರವೇರಿಸಲಾಯಿತು. ಮಕ್ಕಳು ವಿವಿಧ ಆಟವಾಡಿ ಸಂಭ್ರಮಿಸಿದರು. ಈ ಹಬ್ಬದಲ್ಲಿ ಗ್ರಾಮದ ಹಿರಿಯರು, ಕಿರಿಯರು, ಗ್ರಾಮಸ್ಥರು ಸೇರಿ ವಧು-ವರರ ಮೆರವಣಿಗೆ ನಡೆಸಿದರು.
ವಧು-ವರರು ಸಸಿಗಳನ್ನು ನೆಟ್ಟರೆ ಒಳ್ಳೆಯ ಮಳೆ, ಬೆಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.