ಯಾದಗಿರಿ: ಜಿಲ್ಲೆಯ ಸುರಪುರ ಮತಕ್ಷೇತ್ರಕ್ಕೆ ಮೇ 7ರಂದು ಉಪಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾ ವೇಣುಗೋಪಾಲ ನಾಯಕ, ಬಿಜೆಪಿಯಿಂದ ನರಸಿಂಹ ನಾಯಕ (ರಾಜೂಗೌಡ) ಅವರನ್ನು ಹುರಿಯಾಳುಗಳಾಗಿ ಘೋಷಿಸಲಾಗಿದೆ.
ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ:
ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಮೂರು ಕಡೆ ಕಾಂಗ್ರೆಸ್, ಒಂದು ಕಡೆ ಜೆಡಿಎಸ್ ಶಾಸಕರು ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಫೆಬ್ರುವರಿ 25ರಂದು ನಿಧನದಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ತಂಡ ಒಗ್ಗೂಡಿ ಕೆಲಸ ಮಾಡುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯ ಮಟ್ಟದ ನಾಯಕರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವ ಸಾಧ್ಯತೆ ಇದೆ.
ಮರಳಿ ಪಡೆಯುವ ತವಕ:
2018ರಲ್ಲಿ ಬಿಜೆಪಿ ಪಾಲಾಗಿದ್ದ ಸುರಪುರ ಮತಕ್ಷೇತ್ರ 2023ರಲ್ಲಿ ಕಳೆದುಕೊಂಡಿತ್ತು. ವರ್ಷದೊಳಗೆ ಚುನಾವಣೆ ಎದುರಾಗಿದ್ದರಿಂದ ಮರಳಿ ಕ್ಷೇತ್ರ ವಶ ಪಡಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ.
ಮಾರ್ಚ್ 26ರಂದು ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದರಿಂದ ಕಣ ಸ್ಪಷ್ಟವಾಗಿದೆ. ಸುರಪುರ ಮತಕ್ಷೇತ್ರಕ್ಕೆ ಸುರಪುರ, ಹುಣಸಗಿ, ಶಹಾಪುರ ತಾಲ್ಲೂಕಿನ ಕೆಲ ಗ್ರಾಮಗಳು ಸೇರ್ಪಡೆಯಾಗಿವೆ.