ಶಹಾಪುರ: ಮಹಿಳೆಯರು ಸ್ವ ಉದ್ಯೋಗ ಕಂಡುಕೊಳ್ಳುವುದರ ಜೊತೆಗೆ ಸ್ವಾವಲಂಬನೆಯ ಬದುಕು ನಡೆಸಬೇಕು. ಬಡ ವಿದ್ಯಾರ್ಥಿಗಳ ಶಿಕ್ಷಣ ಹಿತದೃಷ್ಟಿಯಿಂದ ಅಂತರ್ಜಾಲದ ಬಳಕೆ ಮಾಡುವ ಉದ್ದೇಶದಿಂದ ಜ್ಞಾನ ತಾಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಹದ್ಲಿ ತಿಳಿಸಿದರು.
ಇಲ್ಲಿನ ಗಂಗಾನಗರದಲ್ಲಿ ಸೋಮವಾರ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಜ್ಞಾನ ತಾಣ ಕಾರ್ಯಕ್ರಮದ ಬಗ್ಗೆ ಅವರು ಮಾಹಿತಿ ನೀಡಿ ಮಾತನಾಡಿದ ಅವರು, ‘ಕಡಿಮೆ ದರದಲ್ಲಿ ಟ್ಯಾಬ್ ಹಾಗೂ ಲ್ಯಾಪ್ ನೀಡಲಾಗುತ್ತದೆ’ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮೂಲ ಉದ್ದೇಶದಂತೆ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಕೊರೊನಾ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಆನ್ ಲೈನ್ ಮೂಲಕ ಪಾಠ ಹಾಗೂ ಇನ್ನಿತರ ಅಮೂಲ್ಯ ಮಾಹಿತಿಯನ್ನು ಶಿಕ್ಷಣ ಇಲಾಖೆ ನೀಡುತ್ತಿರುವಾಗ ಲ್ಯಾಪ್ ಹಾಗೂ ಟ್ಯಾಬ್ ನಿಂದ ಬಡ ವಿದ್ಯಾರ್ಥಿಗಳು ದೂರ ಉಳಿಯಬಾರದು ಎಂದು ಉದ್ದೇಶದಿಂದ ಸಂಸ್ಥೆಯವತಿಯಿಂದ ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾರಾಯಣಚಾರ್ಯ ಸಗರ, ರಕ್ಷಣಾ ವೇದಿಕೆಯ ಮುಖಂಡ ಶರಣು ಗದ್ದುಗೆ, ಲಕ್ಷ್ಮಿ ನಾರಾಯಣ ಶೆಟ್ಟಿ, ವಿಜಯಕುಮಾರ, ಸಾವಿತ್ರಿ, ಶಿವಲಿಂಗಮ್ಮ ಇದ್ದರು