ಶಹಾಪುರ: ‘ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಸಮಾಜದಲ್ಲಿ ಸಾಮರಸ್ಯಕ್ಕೆ ನಾಂದಿ ಆಗುತ್ತದೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಿಸಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಜರುಗಿದ 21 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಕಲ್ಯಾಣ ನಾಡಿನಲ್ಲಿ ಸಮಾನತೆಯ ತತ್ವಸಾರಿ ಸರ್ವರನ್ನು ಒಂದುಗೂಡಿಸುವ ಸಾರ್ಥಕ ಕಾರ್ಯವನ್ನು ಬಸವಣ್ಣ ಮಾಡಿದವರು. ಶೋಷಿತ ಸಮಾಜ ಸ್ವಾಭಿಮಾನದಿಂದ ಬಾಳಬೇಕು ಎಂದು ಹಗಲಿರುಳು ದುಡಿದು ಸಮಾಜಕ್ಕೆ ಹೊಸಬೆಳಕು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ಸಮಾಜಮುಖಿ ಕಾರ್ಯದಲ್ಲಿ ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.
ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ ಕಲ್ಯಾಣ ನಾಡಿನ ಶರಣರ ದಾರ್ಶನಿಕರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಶೋಷಿತ ಸಮುದಾಯಗಳು ಸುಸ್ಥಿತಿಗೆ ಬರಬೇಕಾದರೆ ಶಿಕ್ಷಣವೊಂದೇ ರಾಜಮಾರ್ಗವಾಗಿದೆ. ಸಂವಿಧಾನದ ಆಶಯಗಳನ್ನು ಗೌರವಿಸಿ ಸರ್ವರು ಶಾಂತಿ ಸಹನೆಯಿಂದ ಬಾಳಬೇಕು ಎಂದರು.
ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಆರ್ಥಿಕ ಹೊರೆಯಿಂದ ಹೊರ ಬರುತ್ತವೆ. ಮದುವೆಯ ದುಂದು ವೆಚ್ಚಕ್ಕೆ ಮಾಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ. ತಾಲ್ಲೂಕಿನಲ್ಲಿ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ಕಾರ್ಯ ಮೆಚ್ಚುಗೆಯಾಗಿದೆಎಂದರು.
ಯುವ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ನಗುತಾ ರಂಗನಾಥ, ಸೈದಪ್ಪ ಢಂಗೆ, ಮೌನೇಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಆರಬೋಳ, ಶ್ರೀಧರ್ ಇಂಗಿನಕಲ್, ಶರಣು ದೋರನಹಳ್ಳಿ, ವಿಶ್ವ ನಾಟೇಕಾರ, ಚಂದ್ರನಾಥ ಹತ್ತಿಗೂಡರ್, ರಾಜು ಅಣಬಿ, ಗಂಗಾಧರ ಹೊಟ್ಟಿ ಸೇರಿದಂತೆ ಜಿ. ಪರಮೇಶ್ವರ ಅಭಿಮಾನಿಗಳುಇದ್ದರು.