ಯಾದಗಿರಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬರೋಬ್ಬರಿ 17 ಜನ ಆಕಾಂಕ್ಷಿಗಳು ತಮ್ಮ ಮನದಿಂಗಿತವನ್ನು ವೀಕ್ಷಕರಿಗೆ ಮುಟ್ಟಿಸಿದ್ದು, ಸಂಕ್ರಾಂತಿ ಹಬ್ಬದ ಸಿಹಿ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಪ್ರಸ್ತುತ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ಶರಣಭೂಪಾಲರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರ ಅವಧಿ ಮುಗಿದಿದ್ದು, ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.
ಜಿಲ್ಲೆಯೂ ನಾಲ್ಕು ಮತಕ್ಷೇತ್ರಗಳನ್ನು ಹೊಂದಿದ್ದು, ಈಗಾಗಲೇ ಯಾದಗಿರಿ, ಶಹಾಪುರ ಮತಕ್ಷೇತ್ರದವರು ಮಾತ್ರ ಅಧ್ಯಕ್ಷಗಿರಿ ಅನುಭವಿಸಿದ್ದಾರೆ. ಈ ಬಾರಿ ಸುರಪುರ, ಗುರುಮಠಕಲ್ ಮತಕ್ಷೇತ್ರದಿಂದಲೂ ಆಕಾಂಕ್ಷಿಗಳಿದ್ದು, ಅಧ್ಯಕ್ಷ ಪಟ್ಟ ಯಾರಿಗೆ ಸಿಗಲಿದೆ ಎನ್ನುವುದು ಗುಟ್ಟಾಗಿ ಉಳಿದಿದೆ.
ಬಿಜೆಪಿಯ ಆರು ಮಂಡಲ ಪದಾಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಯಾದಗಿರಿ, ಶಹಾಪುರದಿಂದ ಹೆಚ್ಚು ಆಕಾಂಕ್ಷಿಗಳು: ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ ಮತಕ್ಷೇತ್ರದಿಂದ ಮಾತ್ರ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಉಳಿದ ಸುರಪುರ, ಗುರುಮಠಕಲ್ ಮತಕ್ಷೇತ್ರದಿಂದ ತಲಾ ಒಬ್ಬೊಬ್ಬರು ಮಾತ್ರ ವೀಕ್ಷಕರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರಿಂದ ಎರಡು ಮತಕ್ಷೇತ್ರದಲ್ಲಿ ಮಾತ್ರ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ.
ಈ ಬಾರಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ನೀಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.