ಯಾದಗಿರಿ: ‘ನನಗೆ ಮಂತ್ರಿಯಾಗುವ ಆಸೆಯೇ ಇರಲಿಲ್ಲ. ಆದರೆ, ಈಗ ಶಿಕ್ಷಣ ಖಾತೆ ಕೊಟ್ಟಿದ್ದಾರೆ. 15 ವರ್ಷಕ್ಕೂ ಅಧಿಕ ವಿದ್ಯಾರ್ಥಿ ಪರಿಷತ್ನಲ್ಲಿ ಕೆಲಸ ಮಾಡಿದ್ದೇನೆ. ಇದಕ್ಕಾಗಿ ಕೊಟ್ಟಿರಬಹುದು. ಇದಕ್ಕೆ ಸಂತಸಗೊಂಡಿದ್ದೇನೆ. ನನ್ನ ಸಂಘಟನೆಯ ಬಲ ನನ್ನ ಜೊತೆಗೆ ಇದೆ’ ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದಿನ ಶಿಕ್ಷಣ ಸಚಿವರ ಎಲ್ಲಾ ಕಾರ್ಯಗಳನ್ನು ಫಾಲೋ ಆಪ್ ಮಾಡುತ್ತೇನೆ. ಶೀಘ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡುತ್ತೇನೆ. ಶಿಕ್ಷಕರ ವರ್ಗಾವಣೆ ಮತ್ತು ನೂತನ ಶಿಕ್ಷಕರ ನೇಮಕಾತಿಗೆ ಹೆಚ್ಚಿನ ಶ್ರಮ ವಹಿಸುತ್ತೇನೆ’ ಎಂದರು.
ಈ ವೇಳೆ ಸುರಪುರ ಶಾಸಕ ರಾಜೂಗೌಡ ಮಾತನಾಡಿ, ‘ಸಚಿವ ಸಂಪುಟಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಕೊಡಿ ಎಂದು ಒತ್ತಾಯ ಮಾಡಿದ್ದೇವೆ. ಮುಂದೆಯೂ ಈ ಭಾಗಕ್ಕೆ ಒತ್ತು ಕೊಡಿ ಎಂದು ಒತ್ತಾಯಿಸುತ್ತೇನೆ. ನನಗೆ ಮಂತ್ರಿ ಸ್ಥಾನ ಸಿಗದಕ್ಕೆ ಅದೃಷ್ಟದ ಕೊರತೆಯಿದೆ’ ಎಂದರು.
‘ಸಚಿವ ಮಾಡಿ ಎಂದು ಅರ್ಜಿ ಹಾಕಿದ್ದೆ. ಮಾಡದೆ ಇದ್ದಾಗ ಪಕ್ಷದ ವಿರುದ್ಧ ಮಾತಾಡುವ ಸ್ವಭಾವ ನನ್ನದ್ದಲ್ಲ. ಅನಿವಾರ್ಯವಾಗಿ ಅವರೆ ಮಂತ್ರಿ ಮಾಡುವ ಹಾಗೆ ಕೆಲಸ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ಕೊಡುತ್ತೇನೆ. ನನ್ನನ್ನು ಅತೃಪ್ತರ ಪಟ್ಟಿಯಲ್ಲಿ ಸೇರಿಸಬೇಡಿ. ನಾನು ತೃಪ್ತ ಶಾಸಕ. 29 ಜನರಲ್ಲೇ ನನಗೆ ಅವಕಾಶ ಸಿಕ್ಕಿಲ್ಲ. ಇನ್ನೂ 4 ಜನರಲ್ಲಿ ಅವಕಾಶ ಸಿಗುತ್ತೆ ಅಂತ ಆಸೆ ಇಟ್ಟುಕೊಂಡು ಕೂಡುವುದಿಲ್ಲ’ ಎಂದರು.
ಸಚಿವರ ಜೀರೋ ಟ್ರಾಫಿಕ್ಗೆ ಜನ ಹೈರಾಣು
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪ್ರವಾಹ ಮತ್ತು ಕೋವಿಡ್ ನಿರ್ವಹಣೆ ವೀಕ್ಷಣೆಗೆ ಜಿಲ್ಲೆಯಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. ಆದರೆ, ಸಚಿವ ನಾಗೇಶ್ ಹೋದಕಡೆಯಲ್ಲಾ ಪೊಲೀಸರು, ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರಿಂದ ಜನ ಅಸಮಾಧಾನಕ್ಕೆ ಕಾರಣವಾಗಿದೆ.
ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಕಡೆ ಪ್ರಯಾಣ ಮಾಡಿದ ಸಚಿವರಿಗೆ ಪೊಲೀಸರು ಜೀರೋ ಟ್ರಾಫಿಕ್ ಮಾಡಿದ್ದರು. ಇದರಿಂದ ಜನ ಬಿಸಿಲಿನಲ್ಲಿ ನಿಂತುಕೊಳ್ಳುವಂತೆ ಆಗಿತ್ತು.
ಪ್ರವಾಹ ಮತ್ತುಕೋವಿಡ್ನಿರ್ವಹಣೆ ವೀಕ್ಷಣೆಗೆ ಬಂದಿದ್ದರೂ ಮೊದಲಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜನರ ಅಸಮಾಧಾನಕ್ಕೆ ಕಾರಣವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.