‘ಸರ್ಕಾರದ ಸೌಲಭ್ಯ ಸದುಪಯೋಗ ಮಾಡಿ’

ಆನೂರು.ಕೆ (ಸೈದಾಪುರ): ಗ್ರಾಮೀಣ ಭಾಗದ ಜನರು ಸರ್ಕಾರದ ಯೋಜನೆಗಳನ್ನು, ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಭೀಮರೆಡ್ಡಿ ತಿಳಿಸಿದರು.
ಸಮೀಪದ ಆನೂರು (ಕೆ) ಮತ್ತು ಆನೂರು (ಬಿ) ಗ್ರಾಮಗಳಲ್ಲಿ ಬಾಲಾಜಿ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕ, ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ ಎನ್ಎಸ್ಎಸ್ ಶಿಬಿರದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಆಶಯದಂತೆ ಗ್ರಾಮಗಳನ್ನು ಅಭಿವೃದ್ದಿಗೊಳಿಸಲು ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೆಳಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದತ್ತು ಪಡೆದ ಗ್ರಾಮಗಳಾದ ಆನೂರ.ಬಿ ಮತ್ತು ಆನೂರ.ಕೆ ಗ್ರಾಮಗಳಲ್ಲಿ ಶಿಬಿರ ಹಮ್ಮಿಕೊಂಡಿದ್ದ ಶಿಬಿರಾರ್ಥಿಗಳು ಮುಖ್ಯವಾಗಿ ಪ್ರತಿ ಮನೆ ಮನೆಗೆ ತೆರಳಿ ಬಹು ಆಯಾಮ ಬಡತನ ಸಮೀಕ್ಷೆಯನ್ನು ಮಾಡಲಾಯಿತು.
ಇದರಲ್ಲಿ ಆಧಾರ್ ಕಾರ್ಡ, ಆರೋಗ್ಯ ವಿಮೆ, ಕುಡಿಯುವ ನೀರು, ಮಣ್ಣಿನ ಪರೀಕ್ಷೆ, ಶೌಚಾಲಯ ಮುಂತಾದವುಗಳ ಬಗ್ಗೆ ರೈತರಿಂದ ಮಾಹಿತಿಯನ್ನು ಪಡೆಯಲಾಯಿತು. ಈ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಮತ್ತು ಸೌಲಭ್ಯಗಳಿಂದಾಗುವ ಉಪಯೋಗಗಳ ಕುರಿತು ಗ್ರಾಮಸ್ಥರಿಗೆ ತಿಳಿಹೇಳಿ ಅವುಗಳ ಲಾಭ ಪಡೆಯಬೇಕು ಎಂದು ಶಿಬಿರಾರ್ಥಿಗಳು ವಿವರಿಸಿದರು.
ರಕ್ತದಾನದ ಮಹತ್ವ, ಸಸಿ ನೆಡುವ ಕಾರ್ಯಕ್ರಮ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಉಂಟು ಮಾಡಲಾಯಿತು. ಅಲ್ಲದೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಸ್ವಚ್ಛತೆಯ ಅರಿವು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಅಷ್ಟೆ ಅಲ್ಲದೇ ಇತ್ತೀಚೆಗೆ ಜನರಿಗೆ ಭಯವನ್ನು ಮೂಡಿಸಿರುವ ಕೊರೊನಾ ಬಗ್ಗೆ ಜಾಥಾ ನಡೆಸಿ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.
ಉಪನ್ಯಾಸಕರಾದ ಶ್ವೇತಾ ರಾಘವೇಂದ್ರ ಪೂರಿ, ಭೀಮಶಪ್ಪ, ಮಂಜುನಾಥ, ಮಾರುತಿ, ಎನ್.ಎಸ್.ಎಸ್. ಶಿಬಿರಾರ್ಥಿಗಳು ಹಾಗೂ ಆನೂರ ಮತ್ತು ಆನೂರ.ಕೆ ಗ್ರಾಮದ ಗ್ರಾಮಸ್ಥರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.