ಯಾದಗಿರಿ: ನಗರ ಹೊರವಲಯದ ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟ 4 ಬಾಲಕರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಭಾನುವಾರ 4 ಜನ ಬಾಲಕರು ಮುಳುಗಿ ಮೃತಪಟ್ಟ ಘಟನೆ ಜರುಗಿರುವುದು ವಿಷಾದಕರ ಸಂಗತಿ. ನಾಲ್ಕು ಜನ ಬಡ ವಿದ್ಯಾರ್ಥಿಗಳಾಗಿದ್ದು, ಇವರ ಕುಟುಂಬಕ್ಕೆ ಸರ್ಕಾರ, ಜಿಲ್ಲಾಡಳಿತ ಸೂಕ್ತ ಪರಿಹಾರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬ್ರಿಜ್ ಕಂ ಬ್ಯಾರೇಜ್ ಸ್ಥಳದಲ್ಲಿ ಸೂಕ್ತ ಭದ್ರತೆ ಮತ್ತು ಇನ್ನಿತರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತೇವೆ ಎಂದರು.
ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್ಮು, ಮುಖಂಡರಾದ ಎಚ್ ಕೆ. ಕುರಕುಂದಾ, ಪ್ರಭು ಯಡ್ಡಳ್ಳಿ, ಲಕ್ಷ್ಮಣ ರಾಮಸಮುದ್ರ, ರವಿಕುಮಾರ ಯಡ್ಡಳ್ಳಿ ಇದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ರಾಗಪ್ರಿಯಾ ಸೂಕ್ತ ಕ್ರಮದ ಭರವಸೆ ನೀಡಿದರು.