ಯಾದಗಿರಿ: 2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಂದ ಕಡಲೆಕಾಳು ಖರೀದಿಸಲು ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ರೈತರು ಕೂಡಲೇ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಗಪ್ರಿಯಾ ಆರ್. ಕೋರಿದ್ದಾರೆ.
ಹಿಂಗಾರು ಹಂಗಾಮಿನ ಕಡಲೆಕಾಳು ಹುಟ್ಟುವಳಿಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಟಿಎಪಿಸಿಎಂಎಸ್ ಹಾಗೂ ಎಫ್ಪಿಒಗಳ ಮುಖಾಂತರ ಪ್ರತಿ ಕ್ವಿಂಟಲ್ಗೆ ಸರ್ಕಾರದ ಬೆಂಬಲ ಬೆಲೆ ₹5,230 ಇದೆ. ಪ್ರತಿಯೊಬ್ಬ ರೈತರಿಂದ ಎಕರೆಗೆ 4 ಕ್ವಿಂಟಲ್ರಂತೆ ಗರಿಷ್ಠ 15 ಕ್ವಿಂಟಲ್ ಕಡಲೆಕಾಳು ಖರೀದಿಸಲಾಗುವುದು ಎಂದಿದ್ದಾರೆ.
ಯಾದಗಿರಿ, ಸೈದಾಪುರ, ಗುರುಮಠಕಲ್, ಬೆಂಡೆಬೆಂಬಳಿ, ಶಹಾಪುರ, ದೋರನಹಳ್ಳಿ, ಕೆಂಭಾವಿ, ಹುಣಸಗಿ, ಕೊಡೇಕಲ್, ಸುರಪುರ ಸ್ಥಳಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಫೆ 14 ರ ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ ನೋಂದಣಿ ಅವಧಿಯನ್ನು 45 ದಿನಗಳವರೆಗೆ ಮತ್ತು ಖರೀದಿಸುವ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿಯೊಂದಿಗೆ ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.