ಮಹಾಂತೇಶ ಸಿ. ಹೊಗರಿ
ಕಕ್ಕೇರಾ: ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾದರೂ ರೈತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಮಳೆಯಿಲ್ಲದೇ ಕೈಕಟ್ಟಿ ಕುಳಿತವರು ಕೃಷಿಯತ್ತ ಮತ್ತೆ ಮುಖ ಮಾಡಿದ್ದಾರೆ. ಮಳೆಯಿಂದ ಕಳೆದ ತಿಂಗಳಲ್ಲಿ ಬಿತ್ತಿದ ಬೆಳೆಗಳಿಗೆ ಮರುಜೀವ ಬಂದಿದೆ.
ಜಿಲ್ಲಾದ್ಯಾಂತ ಸುರಿಯುತ್ತಿರುವ ಮಳೆಗೆ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಮೀನಿನಲ್ಲಿ ನೀರು ನಿಂತಿವೆ. ಸ್ವಲ್ಪ ಮಳೆ ಕಡಿಮೆಯಾದರೆ ಸಾಕು, ಬಿತ್ತನೆಗೆ ತೊಗರಿ, ಸಜ್ಜಿ ಬಿತ್ತನೆಗೆ ಸನ್ನದ್ಧರಾಗಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
ಈ ವರ್ಷ ಬರಗಾಲದ ಪ್ರಯುಕ್ತ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಜಿಲ್ಲಾಧಿಕಾರಿ ಘೋಷಿಸಬೇಕು. ರೈತರಿಗೆ ವಿವಿಧ ಸಾಲ ಸೌಲಭ್ಯಗಳು ದೊರೆಯುವಂತಾಗಬೇಕು.ರಾಜು ಹವಾಲ್ದಾರ್, ಪುರಸಭೆ ಮಾಜಿ ಅಧ್ಯಕ್ಷ
‘ರೈತರಿಗೆ ತಾಡಪತ್ರಿ, ಸ್ಪಿಂಕ್ಲರ್ ಪೈಪ್, ಸುಮಾರು 110 ಕ್ವಿಂಟಲ್ ತೊಗರಿ ಬೀಜ ವಿತರಿಸಿದ್ದು, ಹೆಸರು ಬೀಜಗಳನ್ನು ಮಾತ್ರ ಯಾವ ರೈತರು ತೆಗೆದುಕೊಳ್ಳದ ಕಾರಣ ಮರಳಿ ಇಲಾಖೆಗೆ ತಲುಪಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಚನ್ನಪ್ಪಗೌಡ ಮಾಹಿತಿ ನೀಡಿದರು.
ಮಳೆ ಸರಿಯಾದ ಸಕಾಲಕ್ಕೆ ಬಾರದ್ದರಿಂದ ಬಿತ್ತನೆಗೆ ತೊಂದರೆಯಾಗಿತ್ತು.ಈಗ ಬಿತ್ತನೆಗೆ ಸಹಕಾರಿಯಾಗಿದೆ.ಶರಣು ಅಕ್ಕಿ ಸಾಹುಕಾರ, ರೈತ
ಮುಂಗಾರು ಹಿನ್ನಡೆಯಾದರೂ ಕಳೆದ ಮೂರು ದಿನಗಳಿಂದ ಪಟ್ಟಣದ ವ್ಯಾಪ್ತಿಯಲ್ಲಿ ಕ್ರಮವಾಗಿ 2.06, 10.02, 3.04 ಮೀಮಿ ಮಳೆಯಾಗಿದ್ದು, ವಿವಿಧ ವಾರ್ಡ್ಗಳಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು, ಪುರಸಭೆ ಕಾರ್ಮಿಕರು ಮಳೆಯಲ್ಲೇ ಸ್ವಚ್ಛತಾ ಕಾರ್ಯ ಮಾಡುತ್ತಿರುವುದು ಕಂಡು ಬಂದಿತು.
‘ಒಂದೂವರೆ ತಿಂಗಳ ಹಿಂದೆ ಟೊಮೆಟೊ ಬಿತ್ತನೆಗೆ ಸಕಲ ಸಿದ್ಧತೆ ನಡೆಸಿದ್ದೆವು. ಜಮೀನು ಸಮೀಪದ ವಿದ್ಯುತ್ ಪರಿವರ್ತಕ ಸುಟ್ಟಿದ್ದರಿಂದ ಸಮಸ್ಯೆಯಾಯಿತು. ಇಲ್ಲದಿದ್ದರೆ ಟೊಮೆಟೊದಿಂದ ಲಕ್ಷಾಂತರ ರೂಪಾಯಿ ಲಾಭ ಬರುತ್ತಿತ್ತು. ಆದರೂ ಒಂದು ಎಕರೆ ಸೌತೆಕಾಯಿ, ಟೊಮೆಟೊ, ಮೆಣಸಿನಕಾಯಿ, ಮೂಲಂಗಿ ಇನ್ನಿತರ ತರಕಾರಿ ಬೆಳೆಗಳನ್ನು ಬೆಳೆಯಲಾಗಿದ್ದು, 40 ದಿನಗಳಲ್ಲಿ ಸಂಪೂರ್ಣ ಬೆಳೆ ಬರಲಿದೆ’ ಎಂದು ರೈತ ಪ್ರಭು ಹಡಪದ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.