ಯರಗೋಳ: ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಕೊರೊನಾ ಭೀತಿ ಕಾಡಿದೆ. ಅಂಗಡಿಗಳಲ್ಲಿ ಗ್ರಾಹಕರ ಕೊರತೆ ಎದ್ದು ಕಾಣಿಸಿತು. ಪ್ರತಿವರ್ಷ ಬಣ್ಣ ಬಣ್ಣದ ರಾಖಿ ಖರೀದಿಸಲು ಅಂಗಡಿಗಳಲ್ಲಿ ಯುವತಿಯರ ದಂಡು ಕಾಣಿಸುತ್ತಿತ್ತು. ಈ ವರ್ಷ ಕೊರೊನಾ ಸೋಂಕಿನ ಪರಿಣಾಮ ವ್ಯಾಪಾರವಿಲ್ಲದೆ ಅಂಗಡಿಗಳು ಭಣಗುಡುತ್ತಿವೆ.
ಕೊರೊನಾ ಭೀತಿಯಿಂದ ಶಾಲಾ, ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಪರಿಣಾಮ ರಕ್ಷಾ ಬಂಧನ ಸಂಭ್ರಮ ಕಳೆದುಕೊಂಡಿದೆ.
ರಕ್ಷಾ ಬಂಧನ ಹೆಣ್ಣು ಮಕ್ಕಳ ವಿಶೇಷ ಹಬ್ಬವಾಗಿದ್ದು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ಬಾಂಧವ್ಯ ಭದ್ರಗೊಳಿಸುತ್ತಾರೆ.
ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಗೆ ಆಗಮಿಸಿ ಸಹೋದರರಿಗೆ ರಾಖಿ ಕಟ್ಟಿ ಉಡುಗೊರೆಯ ರೂಪದಲ್ಲಿ ಹಣ, ಸೀರೆ, ಬಳೆ ಪಡೆಯುವ ಸಂಪ್ರದಾಯ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಇದೆ.
ಯರಗೋಳದಲ್ಲಿ 10ಕ್ಕೂಹೆಚ್ಚು ಅಂಗಡಿಗಳಲ್ಲಿ ರಾಖಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿ ಹುಸೇನ್ ಪಾಶ ಮಾತನಾಡಿ, ‘ಕೊರೊನಾ ವೈರಸ್ ಪರಿಣಾಮ ಅಂಗಡಿಯಲ್ಲಿ ರಾಖಿ ಮಾರಾಟ ನಿಲ್ಲಿಸಿದ್ದೇವೆ. ಶಾಲಾ, ಕಾಲೇಜು ವಿದ್ಯಾರ್ಥಿನಿಯರೇ ನಮ್ಮ ಗ್ರಾಹಕರು, ಅವರಿದ್ದರೆ ನಮಗೆ ವ್ಯಾಪಾರ’ ಎಂದು ಹೇಳಿದರು.
‘ಕೊರೊನಾ ಭೀತಿಯಿಂದಾಗಿ ತವರು ಮನೆಗೆ ಆಗಮಿಸಿ ಸಹೋದರನಿಗೆ ರಾಖಿ ಕಟ್ಟಲು ಆಗುತ್ತಿಲ್ಲ’ ಎಂದು ರಾಯಚೂರಿನಲ್ಲಿ ನೆಲೆಸಿರುವ ಯರಗೋಳ ಗ್ರಾಮದ ಅಂಬಿಕಾ ಎಸ್.ಪೂಜಾರಿ ತಿಳಿಸಿದರು.
ತವರು ಮನೆಗೆ ಆಗಮಿಸಿರುವೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ ಎಂದು ಪೂಜಾ ವಿ ತಾರಾಪುರ ತಿಳಿಸಿದರು.
***
ತವರು ಮನೆಗೆ ಆಗಮಿಸಿದ್ದೇನೆ. ಪ್ರತಿವರ್ಷದಂತೆ ಈ ವರ್ಷ ರಕ್ಷಾ ಬಂಧನ ಸಂಭ್ರಮ ಇಲ್ಲ. ಈ ವರ್ಷ ಬರೀ ಭಯ ಆವರಿಸಿದೆ. -ಪೂಜಾ ವಿ, ತಾರಾಪುರ