ಸುರಪುರ: ‘ಇಂದಿನ ಬೆಲೆ ಏರಿಕೆ ದಿನದಲ್ಲಿ ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಲುವುದಿಲ್ಲ. ಅಂಗವಿಕಲರ ಮಾಸಾಶನವನ್ನು ₹ 5 ಸಾವಿರಕ್ಕೆ ಹೆಚ್ಚಿಸಬೇಕು' ಎಂದು ಆಗ್ರಹಿಸಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಂದ್ರ ದೊರೆ ಚಂದಲಾಪುರ ಮಾತನಾಡಿ, 'ಯಾದಗಿರಿ ಜಿಲ್ಲೆಯಲ್ಲಿ 21 ಸಾವಿರಕ್ಕೂ ಹೆಚ್ಚು ಅಂಗವಿಕಲರು ಇದ್ದಾರೆ. ಅವರಿಗೆ ಸಮರ್ಪಕವಾಗಿ ಸಿಗಬೇಕಾದ ಸರ್ಕಾರದ ಸೌಲಭ್ಯಗಳು ದೊರಕುತ್ತಿಲ್ಲ' ಎಂದರು.
'ಅಂಗವಿಕಲರಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಿರುವ ಶೇ 5ರಷ್ಟು ಸೌಲಭ್ಯ ಸಮರ್ಪಕವಾಗಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಬೇಕು. ವಸತಿ ಯೋಜನೆಯಲ್ಲಿ ಮನೆಗಳನ್ನು ದೊರಕಿಸಿಕೊಡಬೇಕು. ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಅಂಗವಿಕಲ ಸ್ನೇಹಿ ಶೌಚಾಲಯ ನಿರ್ಮಿಸಬೇಕು' ಎಂದು ಮನವಿ ಮಾಡಿದರು.
'ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಂಗವಿಕಲರಿಗೆ ವೈದ್ಯಕೀಯ ಪ್ರಮಾಣ ಸಮರ್ಪಕವಾಗಿ ದೊರಕಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಇಎನ್ಟಿ ವೈದ್ಯರನ್ನು ನೇಮಿಸಿ, ಪೂರಕವಾದ ಯಂತ್ರಗಳ ವ್ಯವಸ್ಥೆ ಮಾಡಬೇಕು. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಬೇಕು' ಎಂದು ವಿನಂತಿಸಿದರು.
ಶರಣಯ್ಯಸ್ವಾಮಿ ಹಿರೇಮಠ, ದೇವಿಂದ್ರಪ್ಪ ಬಾಚಿಮಟ್ಟಿ, ಪ್ರದೀಪಗೌಡ ಪಾಟೀಲ, ಶಂಕ್ರಯ್ಯಸ್ವಾಮಿ ನರಸಿಂಗಪೇಟ, ಈರಣ್ಣ ರತ್ತಾಳ, ಮಾಳಪ್ಪ ಮಾಚಗುಂಡಾಳ, ಭಾಗಪ್ಪ ಆಲ್ದಾಳ, ದೊಡ್ಡಪ್ಪಗೌಡ ನಾಗರಾಳ, ಸುರೇಶ ಬಡಿಗೇರ, ಮಾಳಪ್ಪ ಪುಜಾರಿ, ಮಾಳಪ್ಪ ಚಿಕ್ಕನಳ್ಳಿ, ಭೀಮಣ್ಣಗೌಡ ಭಂಟನೂರ, ಹುಸನಪ್ಪ ದೇವಾಪುರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.