ಯಾದಗಿರಿ: ಜಿಲ್ಲೆಯ ವಸತಿ ರಹಿತ ಪ್ರೌಢಶಾಲೆಗಳಿಗಿಂತ ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶರಣಬಸವ ಭೀಮಣ್ಣ ಕುರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, 625ಕ್ಕೆ 620 ಅಂಕಗಳನ್ನು ಪಡೆದಿದ್ದಾರೆ. ಎ+ ಜತೆಗೆ ಶೇ 99.20 ಫಲಿತಾಂಶ ಪಡೆದಿದ್ದಾರೆ. ಈ ಮೂಲಕ ವಸತಿ ಶಾಲೆಯ ವಿದ್ಯಾರ್ಥಿ ಹೆಚ್ಚಿನ ಪ್ರತಿಶತ ದಾಖಲಿಸಿದ್ದಾರೆ.
ಮೊರಾರ್ಜಿ ದೇಸಾಯಿ, ಸ್ಥಳೀಯ ಸಂಸ್ಥೆ ಶಾಲೆಗಳು: ಶಹಾಪುರ ತಾಲ್ಲೂಕಿನಲ್ಲಿ 1,637 ಬಾಲಕರಲ್ಲಿ 722 ಉತ್ತೀರ್ಣರಾಗಿದ್ದು, ಶೇ 44.11ರಷ್ಟು ಫಲಿತಾಂಶ ಪಡೆದಿದ್ದಾರೆ. 2,047 ಬಾಲಕಿಯರಲ್ಲಿ 1,253 ಪಾಸಾಗಿದ್ದು, ಶೇ 61.21ರಷ್ಟು ಫಲಿತಾಂಶ ಗಳಿಸಿದ್ದಾರೆ. ಒಟ್ಟಾರೆ 3,684 ವಿದ್ಯಾರ್ಥಿಗಳಲ್ಲಿ 1,975 ಉತ್ತೀರ್ಣರಾಗಿದ್ದು, ಶೇ 53.61 ಪ್ರತಿಶತ ದಾಖಲಿಸಿದ್ದಾರೆ.
ಸುರಪುರ ತಾಲ್ಲೂಕಿನ 1,845 ಬಾಲಕರಲ್ಲಿ 564 ಪಾಸಾಗಿದ್ದು ಶೇ 30.57 ಪ್ರತಿಶತ, 1,953 ಬಾಲಕಿಯರಲ್ಲಿ 986 ಪಾಸಾಗಿದ್ದು, ಶೇ 50.49 ಪ್ರತಿಶತ ಪಡೆದಿದ್ದು, ಒಟ್ಟಾರೆ 3,798 ವಿದ್ಯಾರ್ಥಿಗಳಲ್ಲಿ 1,550 ಉತ್ತೀರ್ಣರಾಗಿದ್ದು, ಶೇ 40.81 ರಷ್ಟು ಫಲಿತಾಂಶ ಬಂದಿದೆ.
ಯಾದಗಿರಿ ತಾಲ್ಲೂಕಿನಲ್ಲಿ 1,582 ಬಾಲಕರಲ್ಲಿ 574 ಪಾಸಾಗಿದ್ದು, ಶೇ 36.28ರಷ್ಟು ಫಲಿತಾಂಶ ಪಡೆದಿದ್ದಾರೆ. ಇನ್ನು 1,975 ಬಾಲಕಿಯರಲ್ಲಿ 1,078 ಪಾಸಾಗಿದ್ದು, ಶೇ 54.58 ಉತ್ತೀರ್ಣರಾಗಿದ್ದಾರೆ. ಒಟ್ಟಾರೆ 3,557 ವಿದ್ಯಾರ್ಥಿಗಳಲ್ಲಿ 1,652 ಉತ್ತೀರ್ಣರಾಗಿದ್ದು, ಶೇ 46.44 ಪ್ರತಿಶತ ಬಂದಿದೆ.
ಜಿಲ್ಲೆಯ 5,064 ಬಾಲಕರಲ್ಲಿ 1,860 ಉತ್ತೀರ್ಣರಾಗಿದ್ದು, ಶೇ 36.73ರಷ್ಟು ಫಲಿತಾಂಶ ಗಳಿಸಿದ್ದಾರೆ. 5,975 ಬಾಲಕಿಯರಲ್ಲಿ 3,317 ಪಾಸಾಗಿದ್ದು, ಶೇ 55.51ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ 11,039 ವಿದ್ಯಾರ್ಥಿಗಳಲ್ಲಿ 5,177 ಪಾಸಾಗಿದ್ದು, ಶೇ 46.90 ರಷ್ಟು ಫಲಿತಾಂಶ ಬಂದಿದೆ.
‘ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಹೆಚ್ಚಿನ ಸಿಬ್ಬಂದಿ ಕೊರತೆ ಇಲ್ಲ. ಆದರೆ, ವಸತಿ ರಹಿತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳಷ್ಟು ಇದೆ. ಅಲ್ಲದೇ ಅತಿಥಿ ಶಿಕ್ಷಕರು ನೇಮಕ ಮಾಡಿಕೊಳ್ಳುವುದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ಶಿಕ್ಷಣ ಪ್ರೇಮಿ ನಾಗರಾಜ ಮಡೆಪಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.