ಯಾದಗಿರಿ: ಅಲ್ಲಿ ಎರಡು ತಿಂಗಳ ನಂತರ ಮಕ್ಕಳ ಕಲರವ ಇತ್ತು. ಬೆಳಿಗ್ಗೆಯೇ ಶಿಕ್ಷಕ, ಶಿಕ್ಷಕಿಯರು, ಶಾಲಾ ಸಿಬ್ಬಂದಿ ಮಕ್ಕಳನ್ನು ಸ್ವಾಗತಿಸಲು ಕಾಯುತ್ತಿದ್ದರು.
ಹೌದು ಇದು ಜಿಲ್ಲೆಯಾದ್ಯಂತ ಬುಧವಾರ (ಮೇ 31) ದಿಂದ ಆರಂಭವಾದ ಗುಣಾತ್ಮಕ ಶೈಕ್ಷಣಿಕ ವರ್ಷ 2023–24 ಶಾಲಾ ಪ್ರಾರಂಭೋತ್ಸವದಲ್ಲಿ ಕಂಡು ಬಂದ ದೃಶ್ಯ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಕಳೆದ ಎರಡು ದಿನಗಳಿಂದ ಶಿಕ್ಷಕರು ತಯಾರಿ ನಡೆಸಿದ್ದರು. ಶಾಲೆಗಳಲ್ಲಿ ಅಡುಗೆ ಸಾಮಾಗ್ರಿ ಸಿದ್ಧತೆ ಮಾಡಿದ್ದರು. ಕೋಣೆ, ಆವರಣ ಸ್ವಚ್ಛತೆ ಮಾಡಿಕೊಂಡಿದ್ದರು.
ಬುಧವಾರ ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ತಳಿರುತೋರಣ ಕಟ್ಟಿ, ರಂಗೋಲಿ ಬಿಡಿಸಿ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರೆ, ಇನ್ನೂ ಕೆಲವು ಕಡೆ ತಿಲಕವಿಟ್ಟು ಮಕ್ಕಳನ್ನು ಬರ ಮಾಡಿಕೊಂಡರು.
ನಂತರ ಶಾಲೆಯಲ್ಲಿ ಹೊಸ ವಿದ್ಯಾರ್ಥಿಗಳನ್ನು ಪರಿಚಯ ಮಾಡಿ ಕೊಳ್ಳಲಾಯಿತು. ನಂತರ ಸಿಹಿಯೂಟ ತಯಾರಿಸಿ ಮಕ್ಕಳಿಗೆ ಬಡಿಸಲಾಯಿತು. ಕೆಲವು ಕಡೆ ಸಮವಸ್ತ್ರ, ಪುಸ್ತಕ ವಿತರಣೆ ಮಾಡಲಾಯಿತು.
ನಗರ ಪ್ರದೇಶದಲ್ಲಿ ಮಕ್ಕಳ ಹಾಜ ರಾತಿ ಕಡಿಮೆ ಪ್ರಮಾಣದಲ್ಲಿತ್ತು. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಕಾಣಿಸಿಕೊಂಡರು. ಬಹುತೇಕ ಕಡೆ ಮಧ್ಯಾಹ್ನದ ವರೆಗೆ ಮಕ್ಕಳು ಇದ್ದರು.
ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗೋಪಾಳಪುರ ಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಹಾಗೂ ಪ್ರಜಾಯತ್ನ ಕರ್ನಾಟಕ ಜಂಟಿ ಸಹಯೋಗದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ವಿಶೇಷ ದಾಖಲಾತಿ ಆಂದೋಲನ ಅದ್ಧೂರಿಯಾಗಿ
ನೆರವೇರಿತು.
ಎತ್ತಿನ ಬಂಡಿ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಕ್ಕಳ ಮನೆ ಮನೆಗೆ ತೆರಳಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ಅರ್ಹ ವಯೋ ಮಾನದ ಮಕ್ಕಳಿಗೆ ಆರತಿ ಬೆಳಗಿ ಬರಮಾಡಿಕೊಂಡರು. ಯಾದಗಿರಿ ಡಯಟ್ ಪ್ರಾಚಾರ್ಯ ಎಸ್.ಎಸ್.ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ, ಕಂದಕೂರ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜೇಶ್ವರಿ ಇದ್ದರು.
ಮುಖ್ಯಶಿಕ್ಷಕ ಶೇಖ್ ಅಲಿಖಾನ್, ಸಹ ಶಿಕ್ಷಕ ಮತ್ತು ಪ್ರಜಾಯತ್ನ ತಾಲ್ಲೂಕು ಸಂಯೋಜಕ ರುದ್ರಸ್ವಾಮಿ ಚಿಕ್ಕಮಠ, ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಪಾಲಕರು, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳು ಇದ್ದರು.
ನಾಯ್ಕಲ್ ಗ್ರಾಮ: ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ಖಾಜಾ ಮೈನುದ್ದೀನ್ ಜಮಶೇರಿ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಹೆಚ್ಚು ಅಂಕಗಳನ್ನು ಪಡೆದು ನಾಯ್ಕಲ್ ಗ್ರಾಮದ ಕೀರ್ತಿ ತಂದು ಉರ್ದು ಶಾಲೆಯ ಹೆಸರನ್ನು ಉಳಿಸಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಬ್ಬಾಸಲಿ ಸಾಬ್ ಮುಲ್ಲಾ, ಮುಖ್ಯಶಿಕ್ಷಕ ಮತ್ತು ಶಾಲೆಯ ಶಿಕ್ಷಕರು, ಊರಿನ ಮುಖಂಡರಾದ ಅಬ್ದುಲ್ ಖದೀರ್, ಇಬ್ರಾಹಿಂ ಸಾಬ್ ಸೌದಾಗರ್, ಮಹಮ್ಮದ್ ಸಾಬ್ ಖುರೇಶಿ ಮತ್ತು ಊರಿನ ಮುಖಂಡರು ಭಾಗವಹಿಸಿದ್ದರು.
ಶಾಲೆಗಳನ್ನು ಸಿಂಗರಿಸಿ ಮಕ್ಕಳಿಗೆ ಸ್ವಾಗತ ಸಿಹಿಯೂಟ, ಸಮವಸ್ತ್ರ, ಪುಸ್ತಕ ವಿತರಣೆ ತಿಂಗಳು ಪೂರ್ತಿ ವಿಶೇಷ ದಾಖಲಾತಿ ಆಂದೋಲನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.