ಸುರಪುರ: ನಗರದ ಬುದ್ಧ ವಿಹಾರದಲ್ಲಿನ ಗೌತಮ ಬುದ್ಧನ ಮೂರ್ತಿ ಧ್ವಂಸಗೊಳಿಸಿದ್ದನ್ನು ಖಂಡಿಸಿ ದಲಿತ ಮತ್ತು ಪ್ರಗತಿಪರ ಸಾಮೂಹಿಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಸುರಪುರ ಬಂದ್ ಭಾಗಶಃ ಯಶಸ್ವಿಯಾಯಿತು.
ವ್ಯಾಪಾರಿಗಳು ಬೆಳಿಗ್ಗೆ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್ ಕರೆಗೆ ಬೆಂಬಲಿಸಿದ್ದರು. ಬಸ್ಗಳು ಬೈಪಾಸ್ ರಸ್ತೆಯಿಂದ ಸಂಚರಿಸಿದವು. ಬಂದ್ನಿಂದಾಗಿ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಆಗಮಿಸದ ಕಾರಣ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಬುದ್ಧವಿಹಾರದಿಂದ ಬೃಹತ್ ಪ್ರತಿಭಟನೆ ಆರಂಭಿಸಿದ ಹೋರಾಟಗಾರರು ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಮೂಲಕ ಗಾಂಧಿವೃತ್ತದಲ್ಲಿ ಸಮಾವೇಶಗೊಂಡರು. ಮೆರವಣಿಗೆಯ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೌದ್ಧ ಬಿಕ್ಕು ವರಜ್ಯೋತಿ ಬಂತೇಜಿ ಮಾತನಾಡಿ, ‘ವಿಶ್ವಕ್ಕೆ ಶಾಂತಿ ಮತ್ತು ಕರುಣೆ ನೀಡಿದ ಗೌತಮ ಬುದ್ಧರ ಮೂರ್ತಿಯನ್ನು ವಿರೂಪಗೊಳಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಿಬೇಕು. ಎರಡು ವರ್ಷಗಳ ಹಿಂದೆಯೇ ಬುದ್ಧ ವಿಹಾರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಮತ್ತು ಕೃತ್ಯಗಳ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದು, ದೂರು ನೀಡಿದ್ದೆವು. ಅದಕ್ಕೆ ಬೆಲೆ ಸಿಗಲಿಲ್ಲ. ಈಗ ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದು ಮೂರ್ತಿ ಭಗ್ನಗೊಳಿಸಿದ್ದಾರೆ’ ಎಂದರು.
‘ಸರ್ಕಾರವೇ ಬುದ್ಧ ವಿಹಾರದಲ್ಲಿ ನೂತನ ಮೂರ್ತಿಯನ್ನು ಬೌದ್ಧ ಬಿಕ್ಕು ಸಂಘದವರ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪಿಸಬೇಕು. ಬುದ್ಧ ವಿಹಾರದ ಸುತ್ತಲೂ ತಡೆಗೋಡೆ, ಸಾಂಚಿ ಸ್ತೂಪ, ಅಗಲವಾದ ರಸ್ತೆ, ಚರಂಡಿ, ಚಿತಾಗಾರ ಭಸ್ಮ ಉಗ್ರಾಣ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
‘ಸಿಸಿಟಿವಿ ಕ್ಯಾಮರಾ ಅಳವಡಿಸಿ, ಎಲ್ಲ ಕಡೆ ಬೆಳಕಿನ ವ್ಯವಸ್ಥೆ ಮಾಡಬೇಕು. ಬಂತೇಜಿಯವರಿಗೆ ಬೌದ್ಧ ಕುಟೀರ ನಿರ್ಮಿಸಬೇಕು. ವಿಹಾರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಮುಗಿಸಿ ಹೆಚ್ಚುವರಿ ₹2 ಕೋಟಿ ಅನುದಾನ ಮಂಜೂರು ಮಾಡಬೇಕು’ ಎಂದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಮನವಿ ಸ್ವೀಕರಿಸಿದರು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾದರೆ ಸೆ. 6ರಂದು ಡಿಸಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಹೇಳಿದರು.
ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂದಗೇರಿ, ರಾಹುಲ್ ಹುಲಿಮನಿ, ರಾಮಣ್ಣ ಕಲ್ಲದೇವನಹಳ್ಳಿ, ರಾಮುನಾಯಕ ಅರಳಹಳ್ಳಿ, ಮರೆಪ್ಪ ಕಾಂಗ್ರೆಸ್, ಮಾನಪ್ಪ ಬಿಜಾಸಪುರ, ಮಾಳಪ್ಪ ಕಿರದಳ್ಳಿ, ರಮೇಶ ಅರಿಕೇರಿ, ಗೋಪಾಲ ತಳವಾರ, ಶಿವಲಿಂಗ ಹಸನಾಪುರ, ರಾಮಣ್ಣ ಶೆಳ್ಳಗಿ, ನಿಂಗಣ್ಣ ಗೋನಾಲ, ಪ್ರಕಾಶ ಆಲ್ಹಾಳ, ವೀರಭದ್ರಪ್ಪ ತಳವಾರಗೇರಾ, ತಿಪ್ಪಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಳ್ಳಿ, ಅಬ್ದುಲ್ ಗಫಾರ್, ಶೇಖ್ ಮಹಿಬೂಬ್ ಒಂಟಿ, ವೆಂಕೋಬ ದೊರೆ, ಉಸ್ತಾದ್ ವಜಾಹತ್ ಹುಸೇನ್, ರಮೇಶ ದೊರೆ, ವೆಂಕಟೇಶ ಬೇಟೆಗಾರ, ಮಲ್ಲಯ್ಯ ಕಮತಗಿ, ದೇವಿಂದ್ರಪ್ಪ ಪತ್ತಾರ, ಅಹ್ಮದ್ ಪಠಾಣ, ಬಸಮ್ಮ ಆಲ್ಹಾಳ, ಮಲ್ಲು ಬಿಲ್ಲವ್, ಖಾಜಾ ಅಜ್ಮೀರ್, ಎಂ.ಪಟೇಲ್, ರವಿ ನಾಯಕ ಬೈರಿಮರಡ್ಡಿ, ಶಂಕರ ಬೊಮ್ಮನಳ್ಳಿ, ರಾಜೂ ಬಡಿಗೇರ್, ಹುಲಗಪ್ಪ ದೇವತ್ಕಲ್, ವಿಶ್ವನಾಥ ಹೊಸ್ಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.