ಯಾದಗಿರಿ: ರಾಯಚೂರು ಲೋಕಸಭೆ, ಸುರಪುರ ಉಪಚುನಾವಣೆ ಕದನ ಮುಕ್ತಾಯವಾಗಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಎಲ್ಲರ ಚಿತ್ತ ಶೂರರ ನಾಡಾದ ಸುರಪುರ ಫಲಿತಾಂಶದತ್ತ ಮುಖಮಾಡಿದೆ.
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುರಪುರ ಮತಕ್ಷೇತ್ರಕ್ಕೆ ಉಪ ಮೇ 7ರಂದು ಬಿರುಸಿನಿಂದ ನಡೆದಿದ್ದು, ಯಾರು ಎಷ್ಟು ಅಂತರದಲ್ಲಿ ಗೆಲ್ಲಲಿಲ್ಲದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಸುರಪುರ ಮತಕ್ಷೇತ್ರವೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠಿತ ಕಣವಾಗಿತ್ತು. ಕಾಂಗ್ರೆಸ್ ಪಕ್ಷ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದ್ದರೆ, ಬಿಜೆಪಿಯು ಕಾಂಗ್ರೆಸ್ನಿಂದ ಸ್ಥಾನ ಕಸಿದುಕೊಳ್ಳಲು ಸಾಕಷ್ಟು ಬೆವರು ಹರಿಸಿದೆ. ಎರಡು ಪಕ್ಷಗಳ ಮುಖಂಡರು ವಾರಗಟ್ಟಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ವಿವಿಧ ದಾಳಗಳನ್ನು ಉದುರಿಸಿದ್ದರು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ರಾಯಚೂರು, ಕಲಬುರಗಿ ಲೋಕಸಭೆ ಕ್ಷೇತ್ರಗಳಿಗೆ ನಿರ್ಣಾಯಕವಾಗಿದೆ. ಇಲ್ಲಿನ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಮತ ಬಂದಿದೆ ಎನ್ನುವುದರ ಮೇಲೆ ಫಲಿತಾಂಶ ನಿಂತಿದೆ.
ಯಾದಗಿರಿ, ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ನ ಸಚಿವ, ಶಾಸಕರಿದ್ದರೆ, ಸುರಪುರಕ್ಕೆ ಉಪಚುನಾವಣೆ ನಡೆದಿದ್ದು, ಗುರುಮಠಕಲ್ ಜೆಡಿಎಸ್ ಶಾಸಕರನ್ನು ಹೊಂದಿದೆ. ಹೀಗಾಗಿ ಆಯಾ ಪಕ್ಷದ ಶಾಸಕರ ಮೇಲೆ ಮತದಾರರ ಒಲಿವಿದ್ದು, ಯಾರು ಗೆಲ್ಲಲಿದ್ದಾರೆ ಎನ್ನುವು ಕುತೂಹಲ ಮನೆ ಮಾಡಿದೆ.
ಲೋಕಸಭೆ ಚುನಾವಣೆ ಜತೆಗೆ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ಸುರಪುರ ಉಪಚುನಾವಣೆ ನಡೆದಿದ್ದು, ಫಲಿತಾಂಶಕ್ಕಾಗಿ ಜೂನ್ 4ರ ತನಕ ಕಾಯಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.