ಸೈದಾಪುರ (ಯಾದಗಿರಿ ಜಿಲ್ಲೆ):ಇಲ್ಲಿಗೆ ಸಮೀಪದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಬಿ. ಪ್ರಾರಲೆಸಸ್ ಕಾರ್ಖಾನೆಯಲ್ಲಿ ಮಂಗಳವಾರ ಬಾಯ್ಲರ್ ಸ್ಫೋಟಗೊಂಡು ಎಂಟು ಕಾರ್ಮಿಕರಿಗೆ ಗಾಯಗಳಾಗಿವೆ.
ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಸೇನ್ ಸಾಬ್, ಆರೀಫ್, ಸೂಪಿಯಾನ್, ಸಮೀರ್, ಇಮ್ರಾನ್, ಇಮ್ರಾನ್ ಶಬ್ಬೀರ್, ರವಿಕುಮಾರ, ವಿಜಯ್ ಗಾಯಗೊಂಡವರು. ಆರು ಜನ ಕಡೇಚೂರು, ಉಳಿದವರು ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದವರು.
ಹಳೆ ಟೈರ್ಗಳನ್ನು ತಂದುಈ ಕಾರ್ಖಾನೆಯಲ್ಲಿ ಕರಗಿಸಿ ಅದರಿಂದ ಬರುವ ಆಯಿಲ್ ಮತ್ತು ಕಾರ್ಬನ್ ಅನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ, ಟೈರ್ ಒಳಗಿರುವ ತಂತಿಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ: ‘ಬಾಯ್ಲರ್ನಲ್ಲಿ 8 ಕಾರ್ಮಿಕರು ಹಳೆ ಟೈರ್ಗಳನ್ನ ಸುಟ್ಟು ಆಯಿಲ್ ತೆಗೆಯುವ ಟೆಸ್ಟಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಬಾಯ್ಲರ್ನ ಮುಚ್ಚಳ ತೆರೆದುಕೊಂಡಿಲ್ಲ. ಆಗ ಎಲ್ಲಾ ಕಾರ್ಮಿಕರು ಸೇರಿ ತೆರೆಯಲು ಯತ್ನಿಸಿದಾಗ ಸ್ಫೋಟಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.