ನಾಳೆ ವಡಗೇರಾ ಪಟ್ಟಣ ಬಂದ್ಗೆ ಕರೆ

ವಡಗೇರಾ: ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಿ 3 ವರ್ಷ ಕಳೆದರೂ ಕೂಡ ಇಲ್ಲಿ ಯಾವುದೇ ತಾಲ್ಲೂಕು ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸಲು ಒತ್ತಾಯಿಸಿ ಸೆ.10 ರಂದು ಪಟ್ಟಣದಲ್ಲಿ ಸಂಪೂರ್ಣ ಬಂದ್ ಆಚರಿಸಲು ವಿವಿಧ ಸಂಘಟನೆಗಳು ಕರೆ ನೀಡಿವೆ. ಆದ್ದರಿಂದ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದು ಮುಖಂಡ ಬಸವರಾಜ ಸೊನ್ನದ ಹೇಳಿದರು.
ಪಟ್ಟಣದ ಹನುಮಾನ್ ಮಂದಿರದಲ್ಲಿ ವಿವಿಧ ಸಂಘಟನೆಯ ಮುಖಂಡರು, ಪಟ್ಟಣದ ಹಿರಿಯರು, ಮುಖಂಡರು ಸೇರಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯಿತಿ ದರ್ಜೆಗೆ ಏರಿಸದೆ ಗ್ರಾಮ ಪಂಚಾಯಿತಿ ಚುನಾವಣಾಗೆ ಸಿದ್ಧತೆ ನಡೆಸಿದೆ. ಆದ್ದರಿಂದ ನಾಳೆ ವಡಗೇರಾ ಪಟ್ಟಣದ ಗ್ರಾಮ ಪಂಚಾಯಿತಿಗೆ ಒಳಪಡುವ ಕೋನಹಳ್ಳಿ, ಬೀರನಕಲ್, ಬಸವನಗರ, ಕಂಠಿತಾಂಡ, ಬೀ ತಾಂಡಾಗಳ ಎಲ್ಲ ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಯುವ ಮುಖಂಡ ಫಕೀರ್ ಅಹ್ಮದ್ ಮಾತನಾಡಿ, ಪಟ್ಟಣದಲ್ಲಿ ಇಲಾಖೆಗಳು ಇಲ್ಲದಿರುವುದರಿಂದ ಹಳೆಯ ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಾಗಿದೆ. ಇದರಿಂದ ನಮ್ಮ ತಾಲ್ಲೂಕು ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗೌರಿಶಂಕರ ಹಿರೇಮಠ, ಕರವೇ ಹೈದ್ರಾಬಾದ್ ಕರ್ನಾಟಕ ಸಂಚಾಲಕ ಶರಣು ಎಸ್.ಇಟಗಿ, ಸಂಗುಗೌಡ ಮಾಲಿ ಪಾಟೀಲ್, ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಮಲ್ಲಣ್ಣ ನೀಲಹಳ್ಳಿ, ಅಂಬೇಡ್ಕರ್ ಸ್ವಾಭಿಮಾನ ಸೇನೆ ತಾಲ್ಲೂಕು ಅಧ್ಯಕ್ಷರು ಗುರುನಾಥ ನಾಟೇಕರ್, ಕರವೇ ಮುಖಂಡ ಅಬ್ದುಲ್ ಚಿಗಾನೂರ, ಬಸವರಾಜ ನೀಲಹಳ್ಳಿ, ಹಣಮಂತ್ರಾಯ ಜಡಿ, ಶಿವರಾಜ್ ಬಾಗೂರು, ಸಂತೋಷ ಕುಮಾರ್ ಬೊಜ್ಜಿ, ಶರೀಫ್ ಕುರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.