ಶಹಾಪುರ: ‘ಗ್ರಾಮದ ಹೊರ ವಲಯದಲ್ಲಿ ಜೋಪಡಿಯಲ್ಲಿ ವಾಸಿಸುವ ಯುವಕನು ಹಳ್ಳಿಯಲ್ಲಿ ಸೈಕಲ್ ಮೇಲೆ ಮಿಠಾಯಿ ಮಾರುವ ಮೂಲಕ ಬದುಕು ಸಾಗಿಸುತ್ತಿರುವಾಗ ಅದೇ ಹಳ್ಳಿಯ ಮಿಠಾಯಿ ಖರೀದಿಸುತ್ತಿದ್ದ ಶ್ರೀಮಂತ ಮನೆತನದ ಯುವತಿಯೊಂದಿಗೆ ಆರಂಭವಾದ ಲವ್ ಸ್ಟೋರಿ ಮುಂದೆ ಏನಾಗಬಹುದು ಎನ್ನುವ ಅಪ್ಪಟ ಉತ್ತರ ಕರ್ನಾಟಕ ಭಾಗದ ಜವಾರಿ ಹುಡುಗನೊಬ್ಬನ ಪ್ರೇಮ ಕಥೆ ಇದಾಗಿದೆ. ಚಿತ್ರ ನೋಡಿದಾಗಲೇ ಸಸ್ಪೆನ್ಸ್, ಥ್ರಿಲ್ ಏನೆಂಬುದು ಗೊತ್ತಾಗಲಿದೆ’ ಎಂದು ಚಿತ್ರ ನಿರ್ದೇಶಕ, ನಟ ದೇವು ಅಂಬಿಗ ತಿಳಿಸಿದರು.
ನಗರದ ಕಸಾಪ ಭವನದಲ್ಲಿ ಗುರುವಾರ ಸೈಕಲ್ ಸವಾರಿ ಚಲನಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಚಿತ್ರದ ಕಥೆ ಕುರಿತು ಮಾತನಾಡಿದರು. ‘ಉತ್ತರ ಕರ್ನಾಟಕ ಭಾಗದ ಕಲಾವಿದರು ಸೇರಿಕೊಂಡು ಶ್ರಮವಹಿಸಿ ಚಿತ್ರ ಮಾಡಿದ್ದೇವೆ, ತಮ್ಮೆಲ್ಲರ ಆಶೀರ್ವಾದ, ಪ್ರೀತಿ ಅಗತ್ಯವಿದ್ದು, ಪ್ರತಿಯೊಬ್ಬರು ಕುಟುಂಬ ಸಮೇತ ಚಿತ್ರ ನೋಡಿ ಹಾರೈಸಬೇಕು’ ಎಂದು ಮನವಿ ಮಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ ಮಾತನಾಡಿ, ‘ಟ್ರೈಲರ್ ನೋಡಿದಾಗಲೇ ಚಿತ್ರದಲ್ಲಿ ಹೊಸ ಸಂಚಲನವಿದೆ ಎಂಬುದು ಅರಿವಿಗೆ ಬರಲಿದೆ. ಪ್ರೇಕ್ಷಕರು, ನಮ್ಮ ಭಾಗದ ಕಲಾವಿದರಿಗೆ ಪ್ರೋತ್ಸಾಹಬೇಕಿದೆ. ಶಹಾಪುರ ತಾಲ್ಲೂಕಿನ ಸಿಂಗನಳ್ಳಿ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯಲ್ಲಿಯೂ ಶೂಟಿಂಗ್ ಮಾಡಿದ್ದಾರೆ. ಸ್ಥಳೀಯ ಕಲಾವಿದರು ಅದರಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ’ ಎಂದರು.
ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ನಾರಾಯಣಾಚಾರ್ಯ ಸಗರ, ಚಿತ್ರದ ಖಳನಾಯಕ ಶಿವಾಜಿ ಮೆಟಗಾರ, ಅಯ್ಯನಗೌಡ ಸಿಂಗನಳ್ಳಿ, ನಿಂಗಣ್ಣ ಹವಾಲ್ದಾರ, ನಟಿ ದೀಕ್ಷಾ, ಸಹಾಯಕ ನಿರ್ದೇಶಕರಾದ ಸಚಿನ್ ಮತ್ತು ನವೀನ್, ಉಪನ್ಯಾಸಕಿ ಹಣಮಂತಿ ಗುತ್ತೇದಾರ, ಕಾವೇರಿ ಪಾಟೀಲ್, ಗೌಡಪ್ಪಗೌಡ ಹುಲಕಲ್ ಇದ್ದರು.