ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ₹ 43.49 ಲಕ್ಷ ಕೊರತೆ ಬಜೆಟ್ ಮಂಡನೆ

2022-23ನೇ ಸಾಲಿನಲ್ಲಿ ₹6.81 ಕೋಟಿ ಆದಾಯ ನಿರೀಕ್ಷೆ, ಕೊರತೆ ಸರಿದೂಗಿಸಲು ಪ್ರಯತ್ನ: ಅಂಬಿಗೇರ
Last Updated 5 ಮೇ 2022, 16:28 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆಯ 2022-23ನೇ ಸಾಲಿನ ₹43.49 ಲಕ್ಷ ಕೊರತೆ ಬಜೆಟ್ ಮಂಡನೆ ಮಾಡಲಾಯಿತು.

ಅಧ್ಯಕ್ಷ ಸುರೇಶ ಅಂಬಿಗೇರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಪಡೆದುಕೊಂಡು ಸಭೆಯಲ್ಲಿ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಬಜೆಟ್ ವಾಚನ ಮಾಡಿದರು.

ಸರ್ಕಾರದ ಅನುದಾನದಲ್ಲಿ ಎಸ್‌ಎಫ್‌ಸಿ ವೇತನ, ಎಸ್‌ಎಫ್‌ಸಿ ವಿದ್ಯುತ್, ಎಸ್‌ಎಫ್‌ಸಿ ಮುಕ್ತನಿಧಿ, ಎಸ್‌ಸಿಪಿ, ಟಿಎಸ್‌ಪಿ, ಕುಡಿಯುವ ನೀರು ಪರಿಹಾರ ನಿಧಿ 15 ನೇ ಹಣಕಾಸು ಅನುದಾನ, ಇನ್ನಿತರ ಅನುದಾನವನ್ನು ಈಗಾಗಲೇ ಸರ್ಕಾರದ ಮುಂಗಡ ಪತ್ರದಲ್ಲಿ ನಗರಸಭೆಗೆ ಹಂಚಿಕೆಯಾದ ಮೊತ್ತಕ್ಕೆ ಅನುಸಾರವಾಗಿ ₹19.45 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಒಟ್ಟಾರೆಯಾಗಿ ಈ ಸಾಲಿನ ಬಜೆಟ್ ₹26.27 ಕೋಟಿ ಆದಾಯ ನಿರೀಕ್ಷಿಸಿದ್ದು, ₹26.72 ಕೋಟಿ ಖರ್ಚಿನ ಅಂದಾಜು ಮಾಡಲಾಗಿದೆ. ಹೀಗಾಗಿ ಹಿಂದಿನ ವರ್ಷಗಳ ಆಸ್ತಿ ತೆರಿಗೆ ಇನ್ನಿತರ ತೆರಿಗಳನ್ನು ವಸೂಲಿ ಮಾಡಿ ಕೊರತೆ ಸರಿದೂಗಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಆದಾಯ ನಿರೀಕ್ಷೆ: ನಗರಸಭೆ ನೀತಿಯಲ್ಲಿ ವಿವಿಧ ತೆರಿಗೆಗಳಿಂದ ಒಟ್ಟು ಕೋಟಿ ₹6.81 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಈ ಆಯವ್ಯಯದಲ್ಲಿ ಯಾದಗಿರಿ ನಗರದ ಸಾರ್ವಜನಿಕರಿಂದ ಹಾಗೂ ನಗರಸಭೆ ಸದಸ್ಯರಿಂದ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಹಿಂದಿನ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಈ ವರ್ಷ ಹಲವಾರು ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಸಾರ್ವಜನಿಕ ಶೌಚಾಲಯ ಸ್ವಚ್ಛತೆಗಾಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಅಂಗವಿಕಲರ ಸಮಸ್ಯೆಗಳನ್ನು ನೀಗಿಸಲು, ಪೌರಕಾರ್ಮಿಕರ ಶೈಕ್ಷಣಿಕ ಅನುಕೂಲಕ್ಕಾಗಿ ಹಾಗೂ ಪತ್ರಿಕಾ ಮಾಧ್ಯಮದವರಿಗಾಗಿ ಧನಸಹಾಯ ಮಾಡುವುದು ಹಾಗೂ ಉದ್ಯಾನಗಳ ನಿರ್ವಹಣೆ ಮಾಡಲಾಗುವುದು ಎಂದರು.

ಈ ವೇಳೆ ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ವಿಲಾಸ ಪಾಟೀಲ, ಚೆನ್ನಕೇಶವ ಬಾಣತಿಹಾಳ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಪ್ರಭಾವತಿ ಕಲಾಲ್, ಮಹಾದೇವಮ್ಮ ಬೀರನೂರ, ವೆಂಕಟರೆಡ್ಡಿ ವನಿಕೇರಿ, ಮಂಜುನಾಥ ದಾಸನಕೇರಿ, ಆನಂದ ಗಡ್ಡಿಮನಿ, ಅಜಯ್ ಸಿನ್ನೂರ ಇದ್ದರು.

ಪತ್ರಕರ್ತರ ಅನುದಾನಕ್ಕೆ ಆಕ್ಷೇಪ
ಈ ಬಾರಿಯ ಬಜೆಟ್‌ನಲ್ಲಿ ಪತ್ರಕರ್ತರ ಆರೋಗ್ಯ ನಿಧಿಗೆ ₹10 ಲಕ್ಷ ತೆಗೆದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆಗ ಮಧ್ಯೆ ಪ್ರವೇಶಿಸಿದ ಸದಸ್ಯೆ ಲಲಿತಾ ಅನಪುರ, ಕಳೆದ ವರ್ಷದ ಬಜೆಟ್‌ನಲ್ಲಿ ತೆಗೆದಿರಿಸಿದ್ದ ₹5 ಲಕ್ಷಗಳಲ್ಲಿ ಪತ್ರಕರ್ತರೊಬ್ಬರು ಒಂದು ಲಕ್ಷ ರೂಪಾಯಿ ಆರೋಗ್ಯ ನಿಧಿ ಅನುದಾನ ಪಡೆದುಕೊಂಡಿದ್ದಾರೆ. ಅದಕ್ಕೆ ಪೂರಕವಾದ ವೈದ್ಯಕೀಯ ವೆಚ್ಚದ ದಾಖಲಾತಿಗಳನ್ನು ಒದಗಿಸಿಲ್ಲ. ಇದಕ್ಕೆ ಯಾರು ಹೊಣೆ.ಈ ಸಲದ ಬಜೆಟ್‌ನಲ್ಲಿ ₹10 ಲಕ್ಷನಿಗದಿ ಮಾಡಿರುವುದಕ್ಕೆ ವೈಯಕ್ತಿಕವಾಗಿ ತಮ್ಮ ವಿರೋಧವಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಉತ್ತರಿಸಿದ ಪೌರಾಯುಕ್ತ ಶರಣಪ್ಪ, ಹಿಂದೆ ಕೆಲವೊಂದು ಲೋಪದೋಷಗಳಾಗಿವೆ. ಹೀಗಾಗಿ ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತ ಪರಿಶೀಲಿಸಲಾಗುವುದು ಎಂದರು.

ಮಧ್ಯೆ ಪ್ರವೇಶ ಮಾಡಿದ ಸುರೇಶ್ ಅಂಬಿಗೇರ ಈಗಾಗಲೇ ₹10 ಲಕ್ಷ ಅನುದಾನ ನಿಗದಿಪಡಿಸಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಚರ್ಚೆ ಮಾಡಿ ಅನುಮೋದನೆ ನೀಡೋಣ ಎಂದು ಚರ್ಚೆಗೆ ಮಂಗಳ ಹಾಡಿದರು. ಇದಕ್ಕೆ ಇತರೇ ಸದಸ್ಯರು ಒಪ್ಪಿಗೆ ಸೂಚಿಸಿದರು.

***

ನಗರದ ಮುಖ್ಯ ರಸ್ತೆಗಳ ಮಧ್ಯೆ ಗಿಡ ನೆಡುವುದು, ನೀರು ಸರಬರಾಜು ಹಾಗೂ ನಿರ್ವಹಣೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗಾಗಿ ಹಣ ನಿಗದಿಪಡಿಸಲಾಗಿದೆ.
-ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT