ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಮುಂಗಾರು ಮುನ್ನವೇ ಸಿಡಿಲಿಗೆ ಮೂವರು ಬಲಿ

ಜಿಲ್ಲೆಯಲ್ಲಿ ಮೂರು ಜನ, 24 ಜಾನುವಾರು ಸಿಡಿಲಿಗೆ ಮೃತ್ಯು
Last Updated 2 ಜೂನ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ನವೇ ಸಿಡಿಲಿಗೆ 3 ಜನ ಮೃತಪಟ್ಟಿದ್ದು, 24 ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ.

ಏಪ್ರಿಲ್‌, ಮೇ ತಿಂಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಆಕಾಲಿಕ ಮಳೆಯಾಗಿ ಅಪಾರ ಹಾನಿಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 1, ಹುಣಸಗಿ ತಾಲ್ಲೂಕಿನಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಹಲವು ಮನೆಗಳು ಕುಸಿದಿದ್ದರೆ, ರೈತರ ಬೆಳೆಗಳಿಗೂ ಹಾನಿಯಾಗಿದೆ.

ಜಮೀನುಗಳಲ್ಲಿದ್ದ ಪ್ರಾಣಿಗಳು ಸಿಡಿಲಿನ ಆರ್ಭಟಕ್ಕೆ ಅಸುನೀಗಿವೆ. ಇನ್ನೂ ಮಳೆಗಾಲ ಪೂರ್ತಿ ಆರಂಭವಾಗಿಲ್ಲ. ಆಗಲೇ ಜನ–ಜಾನುವಾರಿಗೆ ಸಿಡಿಲು ಕುತ್ತು ತಂದಿದೆ.

ಸಿಡಿಲಿಗೆ ಬಲಿಯಾದ ಪ್ರಾಣಿಗಳು: ಏಪ್ರಿಲ್‌, ಮೇ ತಿಂಗಳಲ್ಲಿ ಸಿಡಿಲಿನೊಂದಿಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಹಸು, ಎತ್ತು ಸೇರಿದಂತೆ 24 ಪ್ರಾಣಿಗಳು ಬಲಿಯಾಗಿವೆ. ಯಾದಗಿರಿ ತಾಲ್ಲೂಕಿನಲ್ಲಿ 1, ಶಹಾಪುರ ತಾಲ್ಲೂಕಿನಲ್ಲಿ 3, ಸುರಪುರ ತಾಲ್ಲೂಕಿನಲ್ಲಿ 3, ಗುರುಮಠಕಲ್‌ ತಾಲ್ಲೂಕಿನಲ್ಲಿ 2, ವಡಗೇರಾ ತಾಲ್ಲೂಕಿನಲ್ಲಿ 2, ಹುಣಸಗಿ ತಾಲ್ಲೂಕಿನಲ್ಲಿ 1 ಸೇರಿದಂತೆ 12 ಪ್ರಾಣಿಗಳು ಸಿಡಿಲಿಗೆ ಸತ್ತಿವೆ.

ಕುರಿ, ಕೋಳಿ, ಮೇಕೆ 9 ಮೃತಪಟ್ಟಿವೆ. ಶಹಾಪುರ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 5, ಹುಣಸಗಿ ತಾಲ್ಲೂಕಿನಲ್ಲಿ 3 ಪ್ರಾಣಿಗಳು ಮೃತಪಟ್ಟಿವೆ.

ಎತ್ತು ₹ 50 ಸಾವಿರ, ಹಸು ₹ 30 ಸಾವಿರ, ಕುರಿಗೆ ₹ 4 ಸಾವಿರ ಹೀಗೆ ಆಯಾ ಪ್ರಾಣಿಗಳ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರ ಧನ ಸರ್ಕಾರದಿಂದ ಮಂಜೂರು ಮಾಡಲಾಗುತ್ತಿದೆ.

46 ಮನೆಗಳಿಗೆ ಹಾನಿ: ಕಳೆದ ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮಳೆಗೆ ಭಾಗಶಃ 46 ಮನೆಗಳು ಕುಸಿದಿವೆ. ಹುಣಸಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮನೆಗಳು ಕುಸಿದಿವೆ. ಯಾದಗಿರಿ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 20, ವಡಗೇರಾ ತಾಲ್ಲೂಕಿನಲ್ಲಿ 3, ಹುಣಸಗಿ ತಾಲ್ಲೂಕಿನಲ್ಲಿ 22 ಮನೆಗಳು ಭಾಗಶಃ ಹಾನಿಯಾಗಿವೆ.

3,481 ಹೆಕ್ಟೇರ್‌ ಹಾನಿ: ಆಕಾಲಿಕ ಮಳೆಯಿಂದ 3,481.5 ಹೆಕ್ಟೇರ್‌ ಪ್ರದೇಶ ಮಳೆಯಿಂದ ಹಾನಿಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 385.01 ಹೆಕ್ಟೇರ್‌, ಶಹಾಪುರ ತಾಲ್ಲೂಕಿನಲ್ಲಿ 66.45, ಸುರಪುರ ತಾಲ್ಲೂಕಿನಲ್ಲಿ 1,314.08, ವಡಗೇರಾ ತಾಲ್ಲೂಕಿನಲ್ಲಿ 299.99, ಹುಣಸಗಿ ತಾಲ್ಲೂಕಿನಲ್ಲಿ 1,415.03 ಹೆಕ್ಟೇರ್‌ ಸೇರಿದಂತೆ 3481.05 ಬೆಳೆ ಹಾನಿಯಾಗಿದೆ.

***

ಮೇಘದೂತ, ದಾಮಿನಿ ಆ್ಯಪ್‌ ಬಳಸಲು ಸಲಹೆ
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಸಿಡಿಲಿನಿಂದ ಕೂಡಿದ ಮಳೆ ಸುರಿಯುತ್ತದೆ. ಇಂತಹ ಮಾಹಿತಿ ಪಡೆಯಲು ಸರ್ಕಾರ ಸಿದ್ಧಪಡಿಸಿರುವ ಕೆಲವು ಆ್ಯಪ್‌ಗಳು ರೈತರ ನೆರವಿಗೆ ಬರುತ್ತವೆ.

ರೈತರು, ಮಳೆ, ಕೃಷಿ, ಸಿಡಿಲಿನಿಂದ ಅಪಾಯದಿಂದ ಪಾರಾಗಲು ಸಂಬಂಧಿಸಿದ ಮಾಹಿತಿ ಆ್ಯಪ್‌ನಲ್ಲಿ ದೊರೆಯುತ್ತವೆ. ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ದಾಮಿನಿ’ ಹಾಗೂ ‘ಮೇಘದೂತ’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆಆಯಾ ಪ್ರದೇಶದ ಮಿಂಚಿನ ಮುನ್ಸೂಚನೆ ಪಡೆಯಬಹುದು. ‘ಮೇಘದೂತ’ ಆ್ಯಪ್‌ ರೈತರಿಗೆ, ಜಿಲ್ಲಾವಾರು ಮಾಹಿತಿಯನ್ನು ಕನ್ನಡ ಭಾಷೆಯಲ್ಲೂ ನೀಡಲಾಗುತ್ತಿದೆ. ಈ ಮಾಹಿತಿಯನ್ನು ವಾರಕ್ಕೆ ಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ನವೀಕರಿಸಲಾಗುತ್ತಿದೆ ಎಂದು ಸುರಪುರ ತಾಲ್ಲೂಕಿನ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಕೃಷಿ ಹವಾಮಾನಶಾಸ್ತ್ರ ವಿಷಯ ತಜ್ಞೆ ಡಾ.ಶಿಲ್ಪಾ ವಿ ಮಾಹಿತಿ ನೀಡಿದರು.

***

ಸಿಡಿಲಿಗೆ ಮೃತಪಟ್ಟ ಜಾನುವಾರುಗಳ ಮಾಲಿಕರಿಗೆ ಪರಿಹಾರ ಧನ ವಿತರಿಸಲಾಗುತ್ತದೆ. ಎತ್ತು, ಹಸು ಆಯಾ ಪ್ರಾಣಿಗೆ ಮೌಲ್ಯಕ್ಕೆ ತಕ್ಕಂತೆ ಪರಿಹಾರ ಸರ್ಕಾರದಿಂದ ನೀಡಲಾಗುತ್ತಿದೆ
- ಶಂಕರಗೌಡ ಸೋಮನಾಳ, ಹೆಚ್ಚುವರಿ ಜಿಲ್ಲಾಧಿಕಾರಿ

***

‘ದಾಮಿನಿ’ ಆ್ಯಪ್‌ ಗುಡುಗು ಸಹಿತ ಮಿಂಚಿನ ಚಲನೆಯ ಬಗ್ಗೆ ಕನಿಷ್ಠ 25 ರಿಂದ 30 ನಿಮಿಷಗಳ ಮೊದಲು ಎಚ್ಚರಿಕೆ ನೀಡುತ್ತದೆ. ಸದ್ಯಕ್ಕೆ ಎಚ್ಚರಿಕೆ ಸಂದೇಶಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ದೊರೆಯುತ್ತಿದೆ
- ಡಾ.ಶಿಲ್ಪಾ ವಿ, ಕೃಷಿ ಹವಾಮಾನಶಾಸ್ತ್ರ ವಿಷಯ ತಜ್ಞೆ, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT