ನಾರಾಯಣಪುರ: ಸಮೀಪದ ಮಾರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಾಳ ತಾಂಡಾದಲ್ಲಿ ಕೊಳವೆಬಾವಿ ನೀರು ಕುಡಿದ 9 ಜನ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.
ತಾಂಡಾದಲ್ಲಿ ಎರಡು ಕೊಳವೆಬಾವಿಗಳಿವೆ. ಜನ ದಿನಾಲೂ ಬಳಸುತ್ತಿದ್ದ ಒಂದು ಕೊಳವೆಬಾವಿ ಮೂರು ದಿನಗಳ ಹಿಂದೆ ದುರಸ್ತಿಗೆ ಬಂದಿತ್ತು. ಇನ್ನೊಂದು ಕೊಳವೆಬಾವಿಯ ನೀರು ಕುಡಿದ 4 ಜನರಲ್ಲಿ ಸೋಮವಾರ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಕೂಡಲೇ ಎಲ್ಲರನ್ನೂ ಕೊಡೇಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಕೊಡೇಕಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಪವನರಾವ್ ಮಾಹಿತಿ ನೀಡಿದರು.
ಮಂಗಳವಾರ, ಬುಧವಾರ ಮತ್ತೆ 5 ಜನರಲ್ಲಿ ವಾಂತಿ ಭೇದಿ ಕಂಡು ಬಂದಿದ್ದು, ಅವರಿಗೂ ಚಿಕಿತ್ಸೆ ಕೊಡಿಸಿ ತಾಂಡಾಕ್ಕೆ ಕಳುಹಿಸಿಕೊಡಲಾಗಿದೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ. ನಿತ್ಯವೂ ಬಳಸುವ ಕೊಳವೆಬಾವಿಯನ್ನು ಗ್ರಾಮ ಪಂಚಾಯಿತಿ ದುರಸ್ತಿ ಮಾಡಿಸಿದೆ ಎಂದೂ ಅವರು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸು ನಾಲತವಾಡ, ನೀಲಮ್ಮ ಗಸ್ತಿ, ಇಸ್ಮಾಯಿಲ್, ಆಶಾ ಕಾರ್ಯಕರ್ತೆ ಮಾನಮ್ಮ, ಸವಿತಾ ಇದ್ದರು.