ಯರಗೋಳ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಕೋವಿಡ್ ಲಸಿಕೆ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲನೆ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಲಸಿಕೆ ಹಿಂದಿನ ದಿನ ಪಲಾನುಭವಿಗಳ ಮೊಬೈಲ್ಗೆ ಮಾಹಿತಿ ನೀಡಲಾಗಿತ್ತು. ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಐವರು ಸಿಬ್ಬಂದಿ ಇದ್ದರು. ಲಸಿಕೆ ಪಡೆಯುವ ಫಲಾನುಭವಿಗಳು ತಮ್ಮ ಗುರುತಿನ ಪತ್ರ, ಆಧಾರ ಕಾರ್ಡ್ ತೋರಿಸಿ ನೋಂದಣಿ ಮಾಡಿಸಿದರು.
ಮೊದಲ ಲಸಿಕೆ ಪಡೆದ ಅಂಬ್ರೇಶ ಕುಂಬಾರ ಹೊರಬರುತ್ತಿದ್ದಂತೆಯೇ ಸಿಬ್ಬಂದಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ನಂತರ ನಿಗಾ ಕೊಠಡಿಯಲ್ಲಿ ಅವರನ್ನು ಅರ್ಧಗಂಟೆ ಕೂರಿಸಲಾಯಿತು.
ಆಶಾ ಕಾರ್ಯಕರ್ತೆ ಫಲಾನುಭವಿಗೆ ಕಿರಿಯ ಆರೋಗ್ಯ ಸಹಾಯಕರ ದೂರವಾಣಿ ಸಂಖ್ಯೆ ನೀಡಿ, ಮನೆಯಲ್ಲಿರುವಾಗ ಅರೋಗ್ಯದಲ್ಲಿ ಏನಾದರೂ ಅಡ್ಡ ಪರಿಣಾಮಗಳಾದರೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಲಸಿಕೆ ಅಭಿಯಾನದಲ್ಲಿ ಪ್ರಕ್ರಿಯೆಯಲ್ಲಿ 30 ಆರೋಗ್ಯ ಸಿಬ್ಬಂದಿ ಸಂತಸದಿಂದ ಲಸಿಕೆ ಸ್ವೀಕರಿಸಿದರು ಎಂದು ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪಿರ್ಧೋಜ್ ಝರೀನಾ ತಿಳಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಭಗವಂತ ಅನ್ವರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಕಿರಿಯ ಆರೋಗ್ಯ ಸಹಾಯಕ ಶಿವರಾಜ ಹೂಗಾರ, ಲಿಲ್ಲಿ ಮಾರ್ಗರೇಟ್, ರಾಮಕೃಷ್ಣ, ಔಷಧಿ ತಜ್ಞ ಭೀಮರಾಯ, ಶುಶ್ರೂಷಕಿಯರಾದ ನಳಿನಾ, ಚಂದ್ರಕಲಾ, ತಬಿತಾ, ಪ್ರಮಿಳಾ, ರಜಿಯಾ, ಪ್ರಯೋಗಾಲಯ ಮೇಲ್ವಿಚಾರಕಿ ವಿಜಯಲಕ್ಷ್ಮಿ, ದ್ವಿತೀಯ ದರ್ಜೆ ಸಹಾಯಕ ಮೌನೇಶ, ನೇತ್ರಾಧಿಕಾರಿ ಉಮೇಶ, ಆರೋಗ್ಯ ಸಹಾಯಕಿ ರಿಜ್ವಾನ ಖಾನ್, ಸಹಾಯಕರಾದ ರೇವಣ, ಅಂಬರೀಶ್, ದೊಡ್ಡಬಸಪ್ಪ, ಆಶಾ ಕಾರ್ಯಕರ್ತೆಯರಾದ ಚಂದಮ್ಮ, ಬನ್ನಮ್ಮ, ಇಂದಿರಮ್ಮ, ಗಂಗಮ್ಮ, ಸಕ್ರೆಮ್ಮ, ಶಾಂತಮ್ಮ, ಸಿದ್ದಮ್ಮ, ಪುತಳಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ, ರಾಜೇಶ್ವರಿ, ಕಮಲಿಬಾಯಿ, ಸಹಾಯಕಿಯರಾದ ಬಂಗಾರೆಮ್ಮ, ಸುನಿತಾ, ಮಲ್ಲಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.