ಬೇಲೂರು: ನಬಾರ್ಡ್ ಯೋಜನೆಯಡಿ 86 ಲಕ್ಷ ರೂಪಾಯಿ ವೆಚ್ಚದಲ್ಲಿ ತಾಲ್ಲೂಕಿನ ಬೆಟ್ಟದಾಲೂರಿನಿಂದ ಅಡವಿಬಂಟೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಶಾಸಕ ವೈ.ಎನ್.ರುದ್ರೇಶ್ಗೌಡ ಗುರುವಾರ ಚಾಲನೆ ನೀಡಿದರು.
ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಅಡವಿ ಬಂಟೇನಹಳ್ಳಿ ಜನರು ಪ್ರತಿನಿತ್ಯ ಬಸ್ಗಾಗಿ 6 ಕಿಲೋ ಮೀಟರ್ ನಡೆಯಬೇಕಾಗಿತ್ತು. ರಸ್ತೆ ದುರಸ್ತಿಗಾಗಿ 25 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಅದು ಈಗ ಈಡೇರಿದಂತಾಗಿದೆ.
ನನ್ನ ಮೂರೂವರೆ ವರ್ಷದ ಅವಧಿಯಲ್ಲಿ ನಬಾ ರ್ಡ್ ಯೋಜನೆಯಲ್ಲಿ ಮಾದಿಹಳ್ಳಿ ಹೋಬಳಿಯ ಹೊಲಬಗೆರೆ-ಸವಾಸಿಹಳ್ಳಿ ರಸ್ತೆಗೆ 86 ಲಕ್ಷ, ಹಂದ್ರಾಳು ರಸ್ತೆಗೆ 50 ಲಕ್ಷ, ಕುಂಬಾರಹಳ್ಳಿ-ಶಿರಗುರ ರಸ್ತೆಗೆ 45 ಲಕ್ಷ ಮತ್ತು ಜಾವಗಲ್ ಹೋಬಳಿಯ ಬಕಪ್ಪನ ಕೊಪ್ಪಲು 45 ಲಕ್ಷ ನೀಡಲಾಗಿದೆ.
ಬೆಟ್ಟದಾಲೂರು ಕಾಲೋನಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ 5 ಲಕ್ಷ ಸೇರಿದಂತೆ ತಾಲ್ಲೂಕಿನ 35 ರಿಂದ 40 ಕಾಲೋನಿಗಳಿಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಗರೆ ಸಂತೆ ರಸ್ತೆ ಅಭಿವೃದ್ಧಿಗೆ 10ಲಕ್ಷ, ರಂಗನ ಕೊಪ್ಪಲು ಸಿಮೆಂಟ್ ರಸ್ತೆಗೆ 10 ಲಕ್ಷ ನೀಡಲಾಗಿದೆ ಎಂದರು. ತಾ.ಪಂ ಸದಸ್ಯೆ ಗಂಗಮ್ಮ, ಹಗರೆ ಗ್ರಾ. ಪಂ ಅಧ್ಯಕ್ಷ ಈಶ್ವರ ಪ್ರಸಾದ್ ಮತ್ತಿತರರು ಇದ್ದರು.