ಚಿಕ್ಕಮಗಳೂರು: ಮಾದಕ ವಸ್ತು ಸೇವನೆಯಿಂದ ಮನಸ್ಸಿನ ಹಿಡಿತ ತಪ್ಪಿ ಅಪರಾಧ ಚಟುವಟಿಕೆಗೆ ಪ್ರೇರಣೆಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜ್ ಎ.ಪಾಟೀಲ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜಿಲ್ಲಾ ಉಪ ಕಾರಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಮಾದಕ ವಸ್ತಗಳ ದುಷ್ಪರಿಣಾಮ-ಅರಿವು~ ಕಾರ್ಯಕ್ರಮ ಉದ್ಘಾಟಿಸಿದ ಅವರು, `ಮಾದಕ ವ್ಯಸನಕ್ಕೀಡಾಗದಿರಲು ಎಚ್ಚರ ವಹಿಸಬೇಕು. ಧ್ಯಾನ, ದೃಢ ಸಂಕಲ್ಪ ಮೂಲಕ ವ್ಯಸನ ಮುಕ್ತರಾಗಬಹುದು~ ಎಂದರು.
ಪಶ್ಚಾತ್ತಾಪಪಟ್ಟ ಆರೋಪಿಗಳಿಗೆ ತಪ್ಪು ಒಪ್ಪಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಶಿಕ್ಷೆಯಲ್ಲಿ ವಿನಾಯಿತಿಯೂ ಇದೆ. ಸಣ್ಣ ಅಪರಾಧವೆಸಗಿ ಅನವಶ್ಯಕವಾಗಿ ದೀರ್ಘಕಾಲ ಕಾರಾಗೃಹದಲ್ಲಿರುವ ಬದಲು ಅಪರಾಧ ಎಸಗದಂತೆ ಜೀವನ ನಡೆಸಿರಿ ಎಂದು ಬುದ್ಧಿಮಾತು ಹೇಳಿದರು. ವಕೀಲರ ಸಂಘದ ಕಾರ್ಯದರ್ಶಿ ಆರ್. ನಾಗರಾಜ್, ಪ್ರದೀಪ್ ಚೌಹಾಣ್, ಶಿವಯೋಗಿ ಶಿವಾಚಾರ್ಯ ಸ್ವಾಮಿ, ಟಿ.ಸುರೇಶ್ ಇದ್ದರು.