ಪಾಂಡವಪುರ: ಶಾಲಾ ವಾಹನದಿಂದ ಬಿದ್ದು ಸ್ಥಳದಲ್ಲೇ ಬಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ಕೆ. ಹೊಸೂರು ಬಳಿ ಸೋಮವಾರ ನಡೆದಿದೆ.
ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದ ಕುಮಾರ್ ಅವರ 6 ವರ್ಷದ ಮಗ ಮನೋಜ್ (ಅಚ್ಚು) ಮೃತ ದುರ್ದೈವಿ.
ಆದಿತ್ಯ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮನೋಜ್ ಪ್ರತಿನಿತ್ಯ ಬೇವಿನಕುಪ್ಪೆ ಗ್ರಾಮದಿಂದ ಪಾಂಡವಪುರಕ್ಕೆ ಹೋಗುತ್ತಿದ್ದ. ಎಂದಿನಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಕೆ. ಹೊಸೂರು ಬಳಿ ಬರುತ್ತಿದ್ದಾಗ ವಾಹನದ ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿತು. ಬಾಗಿಲು ಬಳಿ ಕುಳಿತಿದ್ದ ಮನೋಜ್ ಕೆಳಕ್ಕೆ ಉರುಳಿದ ಪರಿಣಾಮ ತಲೆಗೆ ತೀವ್ರ ಗಾಯವಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಾಹನ ಚಾಲಕ ಪರಾರಿಯಾಗಿದ್ದಾನೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮದ ಜನರು ಆಗಮಿಸಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಬಂದ ಡಿವೈಎಸ್ಪಿ ಕಲಾಕೃಷ್ಣಸ್ವಾಮಿ ಜನರ ಮನವೊಲಿಸುವಲ್ಲಿ ಸಫಲರಾದರು.
ಆದಿತ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಕುಮಾರಸ್ವಾಮಿ ಮೃತ ಬಾಲಕನ ಕುಟುಂಬಕ್ಕೆ ರೂ. 2.5 ಲಕ್ಷ ಪರಿಹಾರ ನೀಡಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ, ಕೆಪಿಸಿಸಿ ಸದಸ್ಯ ಎಲ್. ಡಿ. ರವಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.