ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್‌ ‘ಸಿ’ ತಾಂತ್ರಿಕೇತರ ಹುದ್ದೆ ಪ್ರಶ್ನೋತ್ತರ

Last Updated 13 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳಾದ ಲೇಬರ್ ಇನ್‌ಸ್ಪೆಕ್ಟರ್, ಹಾಸ್ಟೆಲ್ ವಾರ್ಡನ್, ಸಾಂಖ್ಯಿಕ ನಿರೀಕ್ಷರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕರವಸೂಲಿಗಾರರು ಈ ಮೊದಲಾದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಭೂ ಸುಧಾರಣೆ ಕುರಿತಾದ ಬಹುಆಯ್ಕೆ ಮಾದರಿ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಸ್ವಾಮಿ ಸಹಜಾನಂದ ಅವರ ಅಧ್ಯಕ್ಷತೆಯಲ್ಲಿ ಆಲ್ ಇಂಡಿಯಾ ಕಿಸಾನ್ ಸಭಾದ ಸಭೆಯು 1936ರ ಏಪ್ರಿಲ್ 11ರಂದು ಉತ್ತರಪ್ರದೇಶದ ಲಖನೌನಲ್ಲಿ ಸಮಾವೇಶಗೊಂಡು ಜಮೀನುದಾರಿ ಪದ್ಧತಿಯ ನಿರ್ಮೂಲನೆಗೆ ಕರೆಕೊಟ್ಟರು.

2. 1928ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ ಫೈಜಾಬಾದ್ ಅಧಿವೇಶನವು ಗೇಣಿ ಕಡಿಮೆ ಮಾಡುವ ಮತ್ತು ಫ್ಯೂಡಲಿಸಮ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವ ಕುರಿತು ನಿರ್ಣಯವನ್ನು ತೆಗೆದುಕೊಂಡಿತು.

3. ಯೋಜನಾ ಆಯೋಗವೂ ಸಹ ಬ್ರಿಟಿಷರ ಆಡಳಿತದ ಕಾಲದಲ್ಲಿದ್ದ ದೋಷಪೂರಿತ ಭೂ ಹಿಡುವಳಿಯ ಸುಧಾರಣೆಯನ್ನು ತರಲು ತಮ್ಮ ಸಲಹಾ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತ್ತು.

4. ಜೆ.ಸಿ. ಕುಮಾರಪ್ಪ ಅವರ ನೇತೃತ್ವದಲ್ಲಿ ನೇಮಕವಾದ ಕಾಂಗ್ರೆಸ್ ಅಗ್ರಿಗೇರಿಯನ್ ಕಮಿಟಿಯು ಭೂ ಸುಧಾರಣೆ ಜಾರಿಗೆ ತರಬೇಕಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚಿಂತನ ಮಂಥನಗಳಿದ್ದ ವರದಿಯನ್ನು 1949ರ ಜುಲೈನಲ್ಲಿ ನೀಡಿತು.

5. 1950ರ ದಶಕದಲ್ಲಿ ಭೂ ಸುಧಾರಣೆ ತರುವುದಕ್ಕೆ ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ವಿರೋಧಿಸಿದವು. ಕಾರಣ ಅಲ್ಲಿ ಕಾಂಗ್ರೆಸೇತರ ಪಕ್ಷಗಳ ಆಡಳಿತವಿತ್ತು.

ಉತ್ತರ ಸಂಕೇತಗಳು

ಎ) 1, 2 ,3 ಮಾತ್ರ ತಪ್ಪಾಗಿದೆ, ಉಳಿದವು ಸರಿ.

ಬಿ) 1, 2, 3 ಮತ್ತು 4 ಮಾತ್ರ ಸರಿಯಾಗಿವೆ

ಸಿ) 2 ಮತ್ತು 4 ತಪ್ಪು. 1 ಮತ್ತು 3 ಸರಿ.

ಡಿ) 1 ರಿಂದ 5ರ ತನಕ ಎಲ್ಲವೂ ಸರಿಯಾಗಿವೆ

ಉತ್ತರ: ಬಿ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಶಾಂತಿ ಮಾರ್ಗದ ಮೂಲಕ ಭೂಸುಧಾರಣೆಗೆ ಪ್ರಯತ್ನ ಮಾಡಲಾಯಿತು, ಆಚಾರ್ಯ ವಿನೋಬಾ ಭಾವೆಯವರ ನೇತೃತ್ವದಲ್ಲಿ ಈ ಕಾರ್ಯ ನಡೆಯಿತು. ಜಯಪ್ರಕಾಶ ನಾರಾಯಣ ಅವರಂತಹ ನಾಯಕರು ಇದಕ್ಕೆ ಬೆಂಬಲಿಸಿದರು.

2. ಭಾರತದಲ್ಲಿರುವ 300 ಮಿಲಿಯನ್ ಎಕರೆ ಕೃಷಿ ಭೂಮಿಯಲ್ಲಿ 50 ಮಿಲಿಯನ್ ಎಕರೆಯನ್ನು ದಾನವಾಗಿ ಪಡೆದು ಭೂಮಿ ಇಲ್ಲದ ಬಡವರಿಗೆ ಹಂಚುವುದು ಭೂದಾನ ಆಂದೋಲನ ಉದ್ದೇಶವಾಗಿತ್ತು.

3. ಭೂದಾನ ಆಂದೋಲನದ ಮೂಲಕ 4 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಬಡವರಿಗೆ ಮರು ಹಂಚಿಕೆ ಮಾಡಲಾಯಿತು. ಬಿಹಾರ ರಾಜ್ಯದಲ್ಲಿ ಚಳವಳಿ ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಪಡೆಯಿತು.

4. ನಮ್ಮ ಕರ್ನಾಟಕದವರೇ ಆದ ಮೀರಾಬಾಯಿ ಕೊಪ್ಪಿಕರ್ ಅವರು ಭೂದಾನ ಚಳವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಲ್ಲಿ 40 ಸಾವಿರ ಎಕರೆ ಭೂಮಿಯನ್ನು ಭೂದಾನದ ಮೂಲಕ ನಿರ್ಗತಿಕರಿಗೆ ನೀಡಲು ಸಹಕರಿಸಿದ್ದರು.

ಉತ್ತರ ಸಂಕೇತಗಳು

ಎ) 1 ರಿಂದ 4ರ ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ.

ಬಿ) 1, 2 ಮತ್ತು 3 ಮಾತ್ರ ಸರಿಯಾಗಿವೆ.

ಸಿ) 1 ಮತ್ತು 3 ಹೇಳಿಕೆ ಮಾತ್ರ ಸರಿಯಾಗಿವೆ.

ಡಿ) 2, 3 ಮತ್ತು 4 ಹೇಳಿಕೆ ಮಾತ್ರ ಸರಿಯಾಗಿವೆ.

ಉತ್ತರ: ಎ

3. ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು ತೆರಿಗೆಯಾಗಿ ಗೇಣಿಯನ್ನು ಮಧ್ಯವರ್ತಿ ನೀಡುವುದನ್ನು ನಿಷೇಧಿಸುವ ಕೆಲಸ ಮಾಡಿದ ಮೊದಲ ರಾಜ್ಯಗಳಲ್ಲಿ ಉತ್ತರ ಪ್ರದೇಶ ಒಂದು, ಉತ್ತರ ಪ್ರದೇಶ ಜಮೀನುದಾರಿ ಅಬಾಲಿಷನ್ ಕಮಿಟಿ ನೇತೃತ್ವವನ್ನು ಈ ಕೆಳಗಿನ ಯಾರು ವಹಿಸಿಕೊಂಡಿದ್ದರು?

ಎ) ಕೈಲಾಷ್ ಜೋಷಿ

ಬಿ) ಜಿ. ಬಿ. ಪಂತ್

ಸಿ) ಸರೋಜನಿ ನಾಯ್ಡು

ಡಿ) ಸುಚೇತಾ ಕೃಪಲಾನಿ

ಉತ್ತರ: ಬಿ

4. ಬಿಹಾರದಲ್ಲಿ ಜಮೀನುದಾರಿ ಪದ್ಧತಿಯನ್ನು ರದ್ದುಪಡಿಸುವ ಕಾರ್ಯಕ್ಕೆ ಸರ್ಕಾರ ಕೈಹಾಕಿದಾಗ, ಜಮೀನುದಾರರು ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಪಟ್ನಾ ಹೈಕೋರ್ಟ್ ಜಮೀನುದಾರರ ಪರವಾಗಿ ತೀರ್ಪು ನೀಡಿದ ಪರಿಣಾಮ ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಹಾಗೆ ತಂದ ತಿದ್ದುಪಡಿಗಳನ್ನು ಗುರುತಿಸಿ

1. 1951ರಲ್ಲಿ ತರಲಾದ ಭಾರತದ ಸಂವಿಧಾನದ ಮೊದಲ ತಿದ್ದುಪಡಿ

2. 1955ರಲ್ಲಿ ತರಲಾದ ಭಾರತದ ಸಂವಿಧಾನದ 4ನೇ ತಿದ್ದುಪಡಿ

3. 1953ರಲ್ಲಿ ತರಲಾದ ಭಾರತದ ಸಂವಿಧಾನದ 2ನೇ ತಿದ್ದುಪಡಿ

4. 1956ರಲ್ಲಿ ತರಲಾದ ಭಾರತದ ಸಂವಿಧಾನದ 6ನೇ ತಿದ್ದುಪಡಿ

ಉತ್ತರ ಸಂಕೇತಗಳು

ಎ) 1 ಮತ್ತು 3 ಹೇಳಿಕೆ ಮಾತ್ರ ಸರಿಯಾಗಿವೆ

ಬಿ) 1 ಮತ್ತು 2 ಮಾತ್ರ ಸರಿಯಾಗಿವೆ

ಸಿ) 1 ಮತ್ತು 4 ಹೇಳಿಕೆ ಮಾತ್ರ ಸರಿಯಾಗಿವೆ

ಡಿ) 1, 2, 3 ಮತ್ತು 4 ಹೇಳಿಕೆ ಮಾತ್ರ ಸರಿಯಾಗಿವೆ

ಉತ್ತರ: ಬಿ

5. ಆಪರೇಷನ್ ಬರ್ಗಾ ಯಾವ ರಾಜ್ಯದಲ್ಲಿ ಜಾರಿಗೆ ತರಲಾಯಿತು?

ಎ) ಬಿಹಾರ

ಬಿ) ಜಮ್ಮು ಕಾಶ್ಮೀರ

ಸಿ) ಪಶ್ಚಿಮ ಬಂಗಾಳ

ಡಿ) ತಮಿಳುನಾಡು

ಉತ್ತರ: ಸಿ (ವಿವರಣೆ: 1978ರಲ್ಲಿ ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಬರ್ಗಾ ಎಂಬುದನ್ನು ಜಾರಿಗೆ ತರಲಾಗಿತ್ತು. ಇಲ್ಲಿ ಹಳ್ಳಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಗೇಣಿದಾರನನ್ನು ಗುರುತಿಸಿ ಭೂಮಿಯ ಮಾಲಿಕತ್ವದ ಹಕ್ಕನ್ನು ಆತನಿಗೆ ನೀಡುವ ಕಾರ್ಯ ಮಾಡಲಾಗಿತ್ತು. ಹೀಗಾಗಿ ಟೆನೆನ್ಸಿ ರೀಫಾರ್ಮ್ ಅನ್ನು ಪಶ್ಚಿಮ ಬಂಗಾಳದಲ್ಲಿ ಚೆನ್ನಾಗಿ ಜಾರಿಗೆ ತರಲು ಸಾಧ್ಯವಾಯಿತು.)

6. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. 1953ರಲ್ಲಿ ಆಗ್ರಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶದಲ್ಲಿ ರಾಜ್ಯ ಸರ್ಕಾರಗಳಿಗೆ ತಕ್ಷಣದಲ್ಲಿ ಭೂ ದಾಖಲೆಗಳನ್ನು ಸಂಗ್ರಹಿಸಿ ಗರಿಷ್ಠ ಭೂಮಿತಿಯನ್ನು ಹೇರಿ ಹೆಚ್ಚುವರಿ ಭೂಮಿಯನ್ನು ಬಡವರಿಗೆ ಹಂಚಲು ತಿಳಿಸಿತು.

2. 1959ರ ಜನವರಿಯಲ್ಲಿ ನಾಗಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭೂಹಿಡುವಳಿಯ ಮೇಲೆ ಮಿತಿ ಹೇರುವ ಬಗ್ಗೆ ನಿರ್ಣಯವನ್ನು ತೆಗೆದುಕೊಂಡ ಪರಿಣಾಮ ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ಭೂಹಿಡುವಳಿಯ ಮೇಲೆ ಮಿತಿ ಹೇರುವ ಶಾಸನವನ್ನು ರಚಿಸಿದವು.

3. 1974ರ ಆಗಸ್ಟ್‌ನಲ್ಲಿ ಭಾರತದ ಸಂವಿಧಾನಕ್ಕೆ 34ನೇ ತಿದ್ದುಪಡಿ ತಂದು ಲ್ಯಾಂಡ್ ಸಿಲೀಂಗ್ ಕಾನೂನುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸದಂತೆ ತಡೆಯಲು 9ನೇ ಶೆಡ್ಯೂಲಿಗೆ ಸೇರಿಸಲಾಯಿತು.

4. ನೀರಾವರಿ ಭೂಮಿಯಾಗಿದ್ದು ವರ್ಷದಲ್ಲಿ 2 ಬೆಳೆ ಬೆಳೆಯುವಂತಹ ಭೂಮಿಯಾಗಿದ್ದರೆ ವೈಯಕ್ತಿಕವಾಗಿ ಗರಿಷ್ಠ 10 ರಿಂದ 18 ಎಕರೆ ಭೂ ಮಾಲಿಕತ್ವ ಪಡೆಯಬಹುದು, ಒಣಭೂಮಿಯಾಗಿದ್ದು ವರ್ಷಕ್ಕೆ ಒಂದೇ ಬೆಳೆಯನ್ನು ಬೆಳೆಯುವ ಸಾಮರ್ಥ್ಯವಿದ್ದರೆ ಒಬ್ಬ ವ್ಯಕ್ತಿ ಗರಿಷ್ಠ 27 ಎಕರೆ ಭೂಮಿಯ ಮಾಲಿಕತ್ವ ಹೊಂದಬಹುದು ಎಂಬ ಮಿತಿಯನ್ನು ಹಾಕಲಾಯಿತು

ಉತ್ತರ ಸಂಕೇತಗಳು

ಎ) 1, 2 ಮತ್ತು 3 ಹೇಳಿಕೆ ಮಾತ್ರ ಸರಿಯಾಗಿವೆ

ಬಿ) 2, 3 ಮತ್ತು 4 ಮಾತ್ರ ಸರಿಯಾಗಿವೆ

ಸಿ) 1, 3 ಮತ್ತು 4 ಹೇಳಿಕೆ ಮಾತ್ರ ಸರಿಯಾಗಿವೆ

ಡಿ) 1, 2, 3 ಮತ್ತು 4 ಹೇಳಿಕೆ ಮಾತ್ರ ಸರಿಯಾಗಿವೆ

ಉತ್ತರ: ಡಿ

7. ಗರಿಷ್ಠ ಭೂಮಿತಿಯನ್ನು ಹೇರಿ ಶಾಸನವನ್ನು ದೇಶದಾದ್ಯಂತ ಮಿತಿಯನ್ನು ಹೇರಲಾಗಿದ್ದರೂ ಕೆಲವು ಸಂದರ್ಭದಲ್ಲಿ ಅವುಗಳಿಗೆ ಅಪವಾದವೂ ಇತ್ತು. ಅಂದರೆ ಗರಿಷ್ಠ ಭೂಮಿತಿಯಿಂದ ಹೊರಕ್ಕೆ ಇಡಲಾಗಿತ್ತು. ಅವು ಯಾವುವು ಗುರುತಿಸಿ?

ಎ) ಟಿ/ಕಾಫಿ/ ರಬ್ಬರ್ ಪ್ಲಾಂಟೇಷನ್‌ಗೆ ಸೇರಿದ ಭೂಮಿ

ಬಿ) ದೊಡ್ಡ ಕುಟುಂಬಗಳು ಹೊಂದಬಹುದಾದ ಭೂಮಿ

ಸಿ) ಮಂತ್ರಿಗಳು ಹಾಗೂ ಅಧಿಕಾರಿ ವರ್ಗ ಹೊಂದಬಹುದಾದ ಭೂಮಿ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

8. ಭೂ ಸುಧಾರಣೆಯ ಭಾಗವಾಗಿ ಭೂಮಿಯ ಕ್ರೋಢಿಕರಣಕ್ಕೆ ಸಂಬಂಧಿಸಿದ ಶಾಸನವನ್ನು ಕಡ್ಡಾಯ ಮಾಡಿ ಜಾರಿಗೊಳಿಸಿದ ರಾಜ್ಯ ಯಾವುದು?

ಎ) ಜಮ್ಮು ಮತ್ತು ಕಾಶ್ಮೀರ

ಬಿ) ಅಸ್ಸಾಂ

ಸಿ) ಪಂಜಾಬ್

ಡಿ) ಕರ್ನಾಟಕ

ಉತ್ತರ: ಸಿ

9.ಭೂದಾನ ಆಂದೋಲನವು ಮೊಟ್ಟ ಮೊದಲು ಈ ಕೆಳಗಿನ ಯಾವ ಸ್ಥಳದಲ್ಲಿ (1951ರ ಏಪ್ರಿಲ್ 18ರಂದು) ಆರಂಭವಾಯಿತು?

ಎ) ಕರ್ನಾಟಕದ ಕಣಗಿನಹಾಳ

ಬಿ) ಬಿಹಾರದ ಕಟೊರಿಯಾ

ಸಿ) ತೆಲಂಗಾಣದ ಪಂಚಪಲ್ಲಿ

ಡಿ) ಉತ್ತರ ಪ್ರದೇಶದ ಉರುವಾ

ಉತ್ತರ: ಸಿ

ಕರ್ನಾಟಕ ಆರ್ಥಿಕತೆ

1. ಕರ್ನಾಟಕದ ಎಕಾನಾಮಿಕ್ ಸರ್ವೇಯಲ್ಲಿ ದಾಖಲಾದ ಅಂಶಗಳನ್ನು ಆಧರಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕೋವಿಡ್-19ರ ಕಾರಣಕ್ಕಾಗಿ ನಮ್ಮ ರಾಜ್ಯದಲ್ಲಿ ಪ್ರಗತಿ ಕುಂಠಿತವಾಗಿತ್ತು ಆದರೂ 2020-21ರಲ್ಲಿ ಕೃಷಿ ಕ್ಷೇತ್ರವು ಶೇ 6.4ರಷ್ಟು ಬೆಳವಣಿಗೆ ದಾಖಲಿಸಿತ್ತು. ಆದರೆ ಕೈಗಾರಿಕಾ ಕ್ಷೇತ್ರವು ಶೇ (–) 5.1 ಮತ್ತು ಸೇವಾ ಕ್ಷೇತ್ರವು ಶೇ (-) 3.1 ದಾಖಲಿಸಿತು. ಅಂದರೆ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳು ಋಣಾತ್ಮಕ ಅಭಿವೃದ್ಧಿ ದರವನ್ನು ದಾಖಲಿಸಿದ್ದವು.

2. ಕರ್ನಾಟಕದಲ್ಲಿ 2020-21ರಲ್ಲಿ ತಲಾ ವರಮಾನ (ಪರ್ ಕ್ಯಾಪಿಟಾ ಇನ್‌ಕಮ್) ₹2 ಲಕ್ಷ 26 ಸಾವಿರ ಇದೆ. 2019-20ಕ್ಕೆ ಹೋಲಿಸಿದರೆ (₹2 ಲಕ್ಷ 23 ಸಾವಿರ ಇತ್ತು) ತುಸು ಹೆಚ್ಚಾಗಿದೆ.

3. ಕರ್ನಾಟಕದಲ್ಲಿ 2020-21ರಲ್ಲಿ ಸುಮಾರು 1863 ಯೋಜನೆಗಳು (ಸ್ಕೀಮ್ಸ್) ಜಾರಿಗೆ ತರಲಾಗಿತ್ತು ಅದಕ್ಕಾಗಿ ₹2,09,561 ಕೋಟಿ ಮೀಸಲಾಗಿರಿಸಲಾಗಿತ್ತು. ಅವುಗಳಲ್ಲಿ ₹10 ಕೋಟಿಗೂ ಅಧಿಕ ಹಣ ಮೀಸಲಾಗಿಟ್ಟ 1 ಸಾವಿರಕ್ಕೂ ಹೆಚ್ಚು ಯೋಜನೆಗಳಿದ್ದವು.

4. ನೀತಿ ಆಯೋಗ ಪ್ರಕಟಿಸಿದ ‘ಇನೋವೇಷನ್ ಇಂಡೆಕ್ಸ್ -2020’ ಪ್ರಕಾರ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ಭಾರತದ ಒಟ್ಟು ಏರೋಸ್ಪೇಸ್ ರಫ್ತಿನಲ್ಲಿ ಶೇ. 65ರಷ್ಟು ಭಾಗ ಕರ್ನಾಟಕದಿಂದಲೇ ಉತ್ಪತ್ತಿಯಾಗುತ್ತಿರುವುದು ವಿಶೇಷ.

ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಉತ್ತರ ಸಂಕೇತಗಳು

ಎ) 1, 3 ಮತ್ತು 4 ಮಾತ್ರ ಸರಿಯಾಗಿವೆ

ಬಿ) 2, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ) 1 ಮತ್ತು 4 ತಪ್ಪು. 2 ಮತ್ತು 3 ಸರಿ.

ಡಿ) 1ರಿಂದ 4ರ ತನಕ ಎಲ್ಲವೂ ಸರಿಯಾಗಿವೆ.

ಉತ್ತರ: ಡಿ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕರ್ನಾಟಕವು ಭಾರತದಲ್ಲಿ ಅತಿದೊಡ್ಡ ಎಲೆಕ್ಟ್ರಾನಿಕ್‌ ಚಿಪ್ ಡಿಸೈನಿಂಗ್ ಹಬ್ ಆಗಿದೆ.

2. ಭಾರತದಲ್ಲಿ ಶೇ. 50ರಷ್ಟು ಮಷಿನ್ ಟೂಲ್‌ಗಳು ಕರ್ನಾಟಕದಲ್ಲಿಯೇ ಉತ್ಪತ್ತಿಯಾಗುತ್ತವೆ.

3. ಭಾರತದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಕರ್ನಾಟಕವು 5ನೇ ಸ್ಥಾನವನ್ನು ಹೊಂದಿದ ರಾಜ್ಯವಾಗಿದೆ.

4. 2007-08 ರಿಂದ 2020-21ರ ಅವಧಿಯಲ್ಲಿ ನಮ್ಮ ರಾಜ್ಯವು 38410 ಮಿಲಿಯನ್ ಅಮೆರಿಕನ್‌ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ.

ಮೇಲಿನ ಹೇಳಿಕೆಗಳನ್ನು ಗಮನಿಸಿ, ಯಾವೆಲ್ಲಾ ಹೇಳಿಕೆಗಳು ತಪ್ಪಾಗಿವೆ ಎಂಬುದನ್ನು ಗುರುತಿಸಿ

ಉತ್ತರ ಸಂಕೇತಗಳು

ಎ) 1 ರಿಂದ 4 ಎಲ್ಲವೂ ತಪ್ಪಾಗಿವೆ

ಬಿ) 1, 3 ಮತ್ತು 4 ಮಾತ್ರ ತಪ್ಪಾಗಿವೆ

ಸಿ) 2 ಮತ್ತು 4 ತಪ್ಪು. 1 ಮತ್ತು 3 ಸರಿ.

ಡಿ) 1ರಿಂದ 4ರ ತನಕ ಯಾವ ಹೇಳಿಕೆಯೂ ತಪ್ಪಾಗಿಲ್ಲ.

ಉತ್ತರ: ಡಿ

3. ಕರ್ನಾಟಕದಲ್ಲಿ 5.5 ಸಾವಿರಕ್ಕೂ ಹೆಚ್ಚು ಮಾಹಿತಿ ತಂತ್ರಜ್ಞಾನ ಕಂಪನಿಗಳು (ಐಟಿ ಕಂಪನಿಗಳು) ಕಾರ್ಯನಿರ್ವಹಿಸುತ್ತಿದ್ದು. 31 ಲಕ್ಷ ಜನರಿಗೆ ಉದ್ಯೋಗವನ್ನು ನೀಡುತ್ತಿವೆ. ಹಾಗಾದರೆ ಇವು ರಾಜ್ಯದ ಜಿಡಿಪಿಗೆ ಎಷ್ಟು ಕೊಡುಗೆಯನ್ನು ನೀಡುತ್ತಿವೆ?

ಎ) ಶೇ. 30

ಬಿ) ಶೇ. 22

ಸಿ) ಶೇ. 18

ಡಿ) ಶೇ.12

ಉತ್ತರ: ಬಿ

4. ಕರ್ನಾಟಕ 2015-20ರ ಸ್ಟಾರ್ಟ್ ಅಪ್ ಪಾಲಿಸಿ ಜಾರಿಗೆ ತಂದಿತು, ರಾಜ್ಯ ಸರ್ಕಾರವು 47.3 ಮಿಲಿಯನ್ ಅಮೆರಿಕನ್‌ ಡಾಲರ್ ಸ್ಟಾರ್ಟ್ಅಪ್ ಕಾರ್ಪಸ್ ಫಂಡ್‌ನಿಂದ ಈ ಕಾರ್ಯ ಆರಂಭಿಸಿತು. ಇಂದು ಕರ್ನಾಟಕ ಸ್ಟಾರ್ಟ್ ಅಪ್ ಸೆಲ್‌ನಿಂದ ಪ್ರಮಾಣಿತ ಒಟ್ಟು ಎಷ್ಟು ಸರ್ಟಿಫೈಡ್ ಸ್ಟಾರ್ಟ್ ಅಪ್‌ಗಳು ಕಾರ್ಯ ನಿರ್ವಹಿಸುತ್ತಿವೆ?

ಎ) 3500

ಬಿ)4500

ಸಿ) 1500

ಡಿ) 750

ಉತ್ತರ: ಸಿ

5. ನಮ್ಮ ಕರ್ನಾಟಕದಲ್ಲಿ 2020-21ರ ಸಾಲಿನಲ್ಲಿ ನವೆಂಬರ್-2020ರ ವರೆಗೆ ₹4874 ಕೋಟಿ ರೂಪಾಯಿಗಳು ಮನರೇಗಾ ಯೋಜನೆಗೆ ಲಭ್ಯವಿತ್ತು, ಅದರ ಪೈಕಿ ₹3978 ಕೋಟಿ ಖರ್ಚು ಮಾಡಿ ಗ್ರಾಮೀಣ ಭಾಗದಲ್ಲಿ 100 ದಿನಗಳ ಕೆಲಸ ನೀಡುವ ಕಾರ್ಯ ಮಾಡಲಾಯಿತು. ಹಾಗಾದರೆ ನಮ್ಮ ರಾಜ್ಯದಲ್ಲಿ ಒಟ್ಟು ಎಷ್ಟು ಕೆಲಸಗಳನ್ನು ಈ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು?

ಎ) 3.49 ಲಕ್ಷ

ಬಿ) 1.49 ಲಕ್ಷ

ಸಿ) 6.49 ಲಕ್ಷ

ಡಿ) 2.49 ಲಕ್ಷ

ಉತ್ತರ: ಡಿ

ಮಾಹಿತಿ: Spardha Bharati UPSC ಯೂಟ್ಯೂಬ್‌ ಚಾನೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT