ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿಗೆ ಜೈವಿಕ ಇಂಧನ

Last Updated 24 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನವೊಂದರ ಕುರಿತಮಾಹಿತಿ ಇಲ್ಲಿದೆ.

ಆಗಸ್ಟ್‌ 10 - ವಿಶ್ವ ಜೈವಿಕ ಇಂಧನ ದಿನವಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹರಿಯಾಣಾದ ಪಾಣಿಪತ್‌ನಲ್ಲಿ ನಿರ್ಮಾಣವಾಗಿರುವ 2ನೇ ತಲೆಮಾರಿನ (2ಜಿ) ಎಥೆನಾಲ್ ಸ್ಥಾವರವನ್ನು ಉದ್ಘಾಟಿಸಿದರು.

ವಿಶ್ವ ಜೈವಿಕ ಇಂಧನ ದಿನದ ಹಿನ್ನೆಲೆ

ಸಾಂಪ್ರದಾಯಿಕ ಪಳಿಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ನವೀಕರಣಗೊಳ್ಳಬಲ್ಲ (ಪಳಯುಳಿಕೆಯೇತರ–Nonfossil fuels) ಇಂಧನಗಳ ಅಗತ್ಯಕುರಿತು ಜಾಗೃತಿ ಮತ್ತು ಜೈವಿಕ ಇಂಧನ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಜನರಲ್ಲಿ ಅರಿವು‌ ಮೂಡಿಸಲು ಪ್ರತಿ ವರ್ಷ ಆಗಸ್ಟ್ 10ರಂದು ವಿಶ್ವ ಜೈವಿಕ ಇಂಧನ ದಿನವನ್ನಾಗಿ ಆಚರಿಸಲಾಗುತ್ತಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 2015ರಿಂದ ಈ ಆಚರಣೆಗೆ ಚಾಲನೆ ನೀಡಿದೆ.

1893ರ ಇದೇ ದಿನಂದು ನೆಲಗಡಲೆ(ಶೇಂಗಾ ಎಣ್ಣೆ) ಎಣ್ಣೆಯಿಂದ ಎಂಜಿನ್ ಓಡಿಸಿದ ಸರ್ ರುಡಾಲ್ಫ್ ಡೀಸೆಲ್ ಅವರ ಸಂಶೋಧನಾ ಪ್ರಯೋಗಗಳನ್ನು ಸ್ಮರಿಸಲಾಗುತ್ತದೆ. ರುಡಾಲ್ಫ್ ಅವರ ಈ ಪ್ರಯತ್ನದಿಂದ ಸಸ್ಯಜನ್ಯ ಎಣ್ಣೆಯು ವಿವಿಧ ಯಾಂತ್ರಿಕ ಎಂಜಿನ್‌ಗಳಿಗೆ ಇಂಧನವಾಗಿ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಲಿದೆ ಎಂಬ ಕಲ್ಪನೆಗೆ ಪುಷ್ಟಿ ಸಿಕ್ಕಿತ್ತು.

ಭಾರತದಲ್ಲಿ ಜೈವಿಕ ಇಂಧನಗಳು

ದೇಶದ ಆರ್ಥಿಕ ಬೆಳವಣಿಗೆ ಮತ್ತು ಸ್ವಚ್ಛಪರಿಸರ ನಿರ್ಮಾಣದ ದೃಷ್ಟಿಯಿಂದ ಜೈವಿಕ ಇಂಧನಗಳು ಬಹಳ ಪ್ರಾಮುಖ್ಯ ಪಡೆದಿವೆ. ಇದು ಸರ್ಕಾರ ಪ್ರಸ್ತುತ ಜಾರಿಗೊಳಿಸಿರುವ ‘ಮೇಕ್ ಇನ್ ಇಂಡಿಯಾ’, ‘ಸ್ವಚ್ಛ ಭಾರತ್‌’ ಮತ್ತು ‘ಕೌಶಲಾಭಿವೃದ್ಧಿ ಯೋಜನೆ’ಗಳ ಕಾರ್ಯೋದ್ದೇಶಗಳಿಗೆ ಪೂರಕವಾಗಿದೆ. ಜತೆಗೆ ರೈತರ ಆದಾಯ ದ್ವಿಗುಣಗೊಳಿಸುವುದು, ಉದ್ಯೋಗ ಸೃಷ್ಟಿ, ತ್ಯಾಜ್ಯದಿಂದ ಸಂಪತ್ತು ಸೃಷ್ಟಿ ಮುಂತಾದ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಲೂ ಪೂರಕವಾಗಿದೆ.

ಜೈವಿಕ ಇಂಧನ ಕಾರ್ಯಕ್ರಮಸ್ಥಳೀಯ( ದೇಶೀಯ) ಕಚ್ಛಾ ವಸ್ತುಗಳು ನಿರಂತರ ಪೂರೈಕೆಯಿಲ್ಲದ ಕಾರಣಜೈವಿಕ ಇಂಧನ ಉತ್ಪಾದನೆಗೆ ಹೆಚ್ಚಿನ‌ ಅಡಚಣೆ ಉಂಟಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ನಿರೀಕ್ಷಿತ ಲಾಭಗಳು

ಆಮದು ಅವಲಂಬನೆಯಲ್ಲಿ ಕಡಿತ: ಒಂದು ಕೋಟಿ ಲೀಟರ್ E10 (ಎಥೆನಾಲ್ ಮಿಶ್ರಿತ ತೈಲ) ತೈಲದಿಂದ ಪ್ರಸ್ತುತ ದರದಲ್ಲಿ ಸರಿಸುಮಾರು ₹ 28 ಕೋಟಿಗಳಷ್ಟು ವಿದೇಶಿ ವಿನಿಮಯವನ್ನು ಉಳಿಸುತ್ತದೆ. ( E10 ಎಂಬುದು ವಾಹನ ಬಳಕೆಯ ಇಂಧನವಾಗಿದ್ದು, ಶೇ 90ರಷ್ಟು ಸಾಮಾನ್ಯ ಸೀಸರಹಿತವಾದ ಪೆಟ್ರೋಲ್‌ನಿಂದ ತಯಾರಿಸಲಾಗಿದೆ. ಇದರಲ್ಲಿ ಶೇ 10ರಷ್ಟು ಎಥೆನಾಲ್ ಇರುತ್ತದೆ. ಆದ್ದರಿಂದಲೇ ಅದನ್ನು E10 ಎನ್ನಲಾಗುತ್ತದೆ)

ಇದು ವಿದೇಶಿ ವಿನಿಮಯ ನಿಕ್ಷೇಪಗಳನ್ನು ಬಲಪಡಿಸುತ್ತದೆ ಮತ್ತು ನಮ್ಮ ದೇಶ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಸ್ವಚ್ಛ ಪರಿಸರ: ಒಂದು ಕೋಟಿ ಲೀಟರ್ E-10 ಇಂಧನ, ಸುಮಾರು 20,000 ಟನ್ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುತ್ತದೆ. ಕೃಷಿ ತ್ಯಾಜ್ಯಗಳನ್ನು ಜೈವಿಕ ಇಂಧನವಾಗಿ ಪರಿವರ್ತಿಸುವುದರಿಂದ ಆ ತ್ಯಾಜ್ಯ ಸುಡುವುದು ಕಡಿಮೆಯಾಗುತ್ತದೆ. ಇದರಿಂದ ಹಸಿರು ಮನೆ ಅನಿಲ ಹೊರಸೂಸುವಿಕೆ ಪರಿಣಾಮ(ಗ್ರೀನ್‌ ಗ್ಯಾಸ್‌ ಎಫೆಕ್ಟ್‌) ಮತ್ತಷ್ಟು ಕಡಿತವಾಗುತ್ತದೆ.

ಆರೋಗ್ಯ ಪ್ರಯೋಜನಗಳು: ಆಹಾರ ತಯಾರಿಸಲು, ವಿಶೇಷವಾಗಿ ಕರಿದ ಆಹಾರಗಳನ್ನು ತಯಾರಿಸಲು ಹೆಚ್ಚಾಗಿ ಅಡುಗೆ ಎಣ್ಣೆಯನ್ನು ಬಳಸಲಾಗುತ್ತದೆ. ದೀರ್ಘಾವಧಿಯಲ್ಲಿ ಈ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಅನಾರೋಗ್ಯ ತಂದೊಡ್ಡಬಹುದು. ಅನೇಕ ರೋಗಗಳ ಸೃಷ್ಟಿಗೂ ಕಾರಣವಾಗಬಹುದು.

ಇಂಥ ಬಳಸಿದ ಅಡುಗೆ ಎಣ್ಣೆಯು ಜೈವಿಕ ಡೀಸೆಲ್‌ ತಯಾರಿಕೆಗೆ ಸಂಭಾವ್ಯ ಕಚ್ಛಾವಸ್ತುವಾಗಿದೆ. ಇದರಿಂದ ಆಹಾರೋದ್ಯಮ ಕ್ಷೇತ್ರದಲ್ಲಿ ಬಳಸಿದ ಅಡುಗೆ ಎಣ್ಣೆಯ ಮರುಬಳಕೆ ತಪ್ಪಿಸಬಹುದು.

ಘನತ್ಯಾಜ್ಯ ನಿರ್ವಹಣೆ: ಭಾರತದಲ್ಲಿ ವಾರ್ಷಿಕವಾಗಿ 62 MMT (ಮಿಲಿಯನ್ ಮೆಟ್ರಿಕ್ ಟನ್‌) ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಉತ್ಪತ್ತಿಯಾಗುವುದಾಗಿ ಅಂದಾಜಿಸಲಾಗಿದೆ(ಮುನಿಸಿಪಲ್ ಸಾಲಿಡ್ ವೇಸ್ಟ್‌). ಜೈವಿಕ ತ್ಯಾಜ್ಯ , ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಘನತ್ಯಾಜ್ಯಗಳನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಲು ಸಂಶೋಧನೆಗಳು‌ ನಡೆಯುತ್ತಿವೆ.

ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಹೂಡಿಕೆ: ಒಂದು ದಿನಕ್ಕೆ 100 klpd (Kilo liters per day) ಜೈವಿಕ ಸಂಸ್ಕರಣಾಗಾರಕ್ಕೆ ಸುಮಾರು ₹800 ಕೋಟಿ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು ₹10,000 ಕೋಟಿ ಹೂಡಿಕೆಯೊಂದಿಗೆ ಹನ್ನೆರಡು 2G ಜೈವಿಕ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಮುಂದಾಗಿವೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಮೇಲಿನ ಹೂಡಿಕೆಯನ್ನು ಉತ್ತೇಜಿಸುತ್ತದೆ.

ಉದ್ಯೋಗ ಸೃಷ್ಟಿ: ಗ್ರಾಮೀಣ ಪ್ರದೇಶಗಳಲ್ಲಿ 100klpd - (Kiloleters per day) ಸಾಮರ್ಥ್ಯದ 2G ಜೈವಿಕ ಸಂಸ್ಕರಣಾಗಾರ ಸ್ಥಾಪನೆಯಿಂದ ಸುಮಾರು 1,200ರಷ್ಟು ಉದ್ಯೋಗಗಳು ಸೃಷ್ಟಿಯಾಗಬಹುದು (ಉದ್ಯಮಿಗಳು ಮತ್ತು ಪೂರೈಕೆದಾರ ಸರಪಳಿಯಲ್ಲಿ) ಎಂದು ಅಂದಾಜಿಲಾಗಿದೆ.

ರೈತರಿಗೆ ಹೆಚ್ಚುವರಿ ಆದಾಯ: ರೈತರು ಕೃಷಿ ತ್ಯಾಜ್ಯಗಳನ್ನು ಸುಡುವ ಬದಲು,2ಜಿ ತಂತ್ರಜ್ಞಾನದೊಂದಿಗೆ ಅದೇ ತಾಜ್ಯವನ್ನು ಎಥೆನಾಲ್‌ ಆಗಿ ಪರಿವರ್ತಿಸಬಹುದು. ಈ ಉತ್ಪನ್ನಕ್ಕೆ ಸರಿಯಾದ ಮಾರುಕಟ್ಟೆ ಲಭ್ಯವಾದರೆ, ಕೃಷಿ ತ್ಯಾಜ್ಯಕ್ಕೆ ಉತ್ತಮ ಬೆಲೆಯೂ ಸಿಗಬಹುದು. ‌ಮಾತ್ರವಲ್ಲ, ಹೆಚ್ಚುವರಿ ಬೆಳೆ ಬೆಳೆದು, ಆ ಉತ್ಪನ್ನಗಳಿಗೆ ಬೆಲೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾದಾಗ,ಹೆಚ್ಚುವರಿ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯಗಳನ್ನು ಎಥೆನಾಲ್ ಆಗಿ ಪರಿವರ್ತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT