ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋನ್‌–ಇನ್‌ಗೆ ಉತ್ತಮ ಸ್ಪಂದನೆ: ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ನಿವಾರಣೆ

ಶಿಕ್ಷಣ ಇಲಾಖೆಯ ಪೋನ್‌–ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ
Last Updated 13 ಮೇ 2021, 13:17 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ 2ನೇ ಅಲೆ ಭೀತಿಯ ನಡುವೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಶಿಕ್ಷಣ ಇಲಾಖೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೊದಲ ಫೋನ್‍–ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರೆ ಮಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಪರೀಕ್ಷೆಗೆ ಸಂಬಂಧಿಸಿದಂತೆ ಗೊಂದಲ ಪರಿಹರಿಸಿಕೊಂಡರು. ಗ್ರಾಮೀಣ ಭಾಗದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿದ್ದು ವಿಶೇಷವಾಗಿತ್ತು.

ಪ್ರಶ್ನೆ ಕೇಳಿದ ಬಹುಪಾಲು ವಿದ್ಯಾರ್ಥಿಗಳಲ್ಲಿ ಕೋವಿಡ್ ಮತ್ತು ಪರೀಕ್ಷಾ ಭಯ ಕಾಣಲಿಲ್ಲ. ಪ್ರತಿಯೊಬ್ಬರೂ ಪರೀಕ್ಷಾ ಸಿದ್ಧತೆ, ಪಠ್ಯಕ್ರಮ ಕಡಿತ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ ಬಗ್ಗೆ ಪ್ರಶ್ನೆ ಕೇಳಿ ಗೊಂದಲ ಪರಿಹರಿಸಿಕೊಂಡರು. ಯಾವುದೇ ವಿದ್ಯಾರ್ಥಿ ಕೋವಿಡ್ 2ನೇ ಅಲೆಯ ಆತಂಕದ ಬಗ್ಗೆ ಚಕಾರವೆತ್ತಲಿಲ್ಲ.

ಆದರೆ, ಕಾರ್ಯಕ್ರಮಕ್ಕೆ ಕರೆ ಮಾಡಿದ ಕೆಲ ಪೋಷಕರು ಕೋವಿಡ್‌ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೆಲ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ನಡೆಯುವುದೇ ಎಂದು ಪ್ರಶ್ನಿಸಿದರು.

‘ಫೋನ್‌–ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು 1,100ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಉತ್ತರ ನೀಡಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

‘ಕೊರೊನಾ ಸೋಂಕು ಗಣನೀಯವಾಗಿ ಏರಿಕೆ ಆಗುತ್ತಿರುವುದರಿಂದ ಪೋಷಕರಲ್ಲಿ ಭಯ ಸಾಮಾನ್ಯ. ಪರೀಕ್ಷೆ ಹೇಗೆ ನಡೆಸುತ್ತೀರಿ ಎಂಬ ಪ್ರಶ್ನೆಗಳೂ ಪೋಷಕರಿಂದ ಕೇಳಿ ಬಂದಿದ್ದು, ಅವರ ಗೊಂದಲ ನಿವಾರಿಸಲಾಗಿದೆ. ಸರ್ಕಾರ ಪರೀಕ್ಷೆ ನಡೆಸುವಂತೆ ಸೂಚಿಸಿದರೆ ಇಲಾಖೆ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸುತ್ತದೆ. ಆದರೆ, ಸರ್ಕಾರದ ತೀರ್ಮಾನವೇ ಅಂತಿಮ’ ಎಂದರು.

ಪಠ್ಯಪುಸ್ತಕ ಓದಿ: ‘ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ಮಕ್ಕಳಿಂದ 80 ಪ್ರಶ್ನೆ ಬಂತು. ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ 140 ಪ್ರಶ್ನೆ, ಇಂಗ್ಲೀಷ್ ವಿಷಯಕ್ಕೆ 110 ಪ್ರಶ್ನೆ, ಹಿಂದಿಗೆ 210 ಪ್ರಶ್ನೆ, ಗಣಿತ ವಿಷಯಕ್ಕೆ 200 ಪ್ರಶ್ನೆ, ವಿಜ್ಞಾನ ವಿಷಯಕ್ಕೆ 180 ಪ್ರಶ್ನೆ ಹಾಗೂ ಸಮಾಜ ವಿಜ್ಞಾನ ವಿಷಯದ ಸಂಬಂಧ 160 ಪ್ರಶ್ನೆಗಳನ್ನು ಮಕ್ಕಳು ಕೇಳಿದರು’ ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್‌ ವಿವರಿಸಿದರು.

‘ಅತಿ ಹೆಚ್ಚು ಅಂಕ ಗಳಿಸಲು ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರತಿ ಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬೇಕು. ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆ, ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಮಾಲಿಕೆ ಓದಬೇಕು. ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪುನರ್ಮನನ: ‘ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿ ಇರುತ್ತವೆ. ಈ ಬಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರುತ್ತದೆ. ಶೇ 10ರಷ್ಟು ಮಾತ್ರ ಕಠಿಣ ಪ್ರಶ್ನೆಗಳಿರುತ್ತವೆ. ಪುಸ್ತಕದಲ್ಲಿನ ಮಾಹಿತಿ ಹೊರತುಪಡಿಸಿ ಬೇರೆ ಪ್ರಶ್ನೆ ಕೇಳುವುದಿಲ್ಲ. ಕನ್ನಡ, ಇಂಗ್ಲೀಷ್, ಹಿಂದಿಯಲ್ಲಿ ವ್ಯಾಕರಣ ಕುರಿತಂತೆ ಹೆಚ್ಚು ಪ್ರಶ್ನೆಗಳಿರುತ್ತವೆ. ಗಣಿತದಲ್ಲಿ 4 ಅಂಕಗಳ ಪ್ರಶ್ನೆ, ಗ್ರಾಫ್‌ ಲೆಕ್ಕಗಳ ಕುರಿತು ಪ್ರಶ್ನೆ ಬರುತ್ತವೆ’ ಎಂದು ಮಾಹಿತಿ ನೀಡಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ, ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT