ನರ್ಮದಾ ನದಿ ತೀರದಲ್ಲಿರುವ ಮಧ್ಯಪ್ರದೇಶದ ಜಬಲ್ಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಪಕ್ಷದ ಭದ್ರಕೋಟೆಯಾಗಿರುವ ಇಲ್ಲಿಂದ ಬಿಜೆಪಿಯು ರಾಜ್ಯ ಸಚಿವ ಆಶಿಶ್ ದುಬೆ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷವು ದಿನೇಶ್ ಯಾದವ್ ಅವರನ್ನು ಅಖಾಡಕ್ಕಿಳಿಸಿದೆ. ಗೊಂಡ್ವಾನಾ ಗಣತಂತ್ರ ಪಕ್ಷವು (ಜಿಜಿಪಿ) ಉದಯ್ ಕುಮಾರ್ ಸಾಹು ಅವರನ್ನು ಹಾಗೂ ಬಿಎಸ್ಪಿಯು ರಾಕೇಶ್ ಚೌಧರಿ ಅವರನ್ನು ಸ್ಪರ್ಧಿಯಾಗಿಸಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯ ರಾಕೇಶ್ ಸಿಂಗ್ ಅವರು, 4,54,744 ಮತಗಳ ಅಂತರದಿಂದ ಕಾಂಗ್ರೆಸ್ನ ವಿವೇಕ್ ಕೃಷ್ಣ ತಂಕಾ ಅವರನ್ನು ಸೋಲಿಸಿದ್ದರು. ಆಶಿಶ್ ದುಬೆ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಆಪ್ತರಾಗಿದ್ದು, ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಇವರು ಇದೇ ಮೊದಲ ಬಾರಿ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಇವರ ತಂದೆ ಅಂಬಿಕೇಶ್ವರ್ ದುಬೆ ಅವರು ಬಿಜೆಪಿಯ ಹಿರಿಯ ಮುಖಂಡರಾಗಿದ್ದಾರೆ. ದುಬೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದಾಗ ಆರಂಭದಲ್ಲಿ ಪಕ್ಷದೊಳಗಿನ ಕೆಲ ಮುಖಂಡರು ವಿರೋಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಯಾದವ್ ಅವರು ಉದ್ಯಮಿಯೂ ಹೌದು. ಕ್ಷೇತ್ರದಲ್ಲಿರುವ ಶೇ7.4ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗಲಿವೆ ಎಂಬುದು ಆ ಪಕ್ಷದ ಮುಖಂಡರ ವಿಶ್ವಾಸ. 2004ರಿಂದಲೂ ಬಿಜೆಪಿಯ ಹಿಡಿತದಲ್ಲಿರುವ ಕ್ಷೇತ್ರವನ್ನು ಈ ಬಾರಿಯಾದರೂ ಗೆಲ್ಲಲೇಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ.