ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರ ಮಹಾತ್ಮೆ: ಉಡುಪಿ

ಉಡುಪಿ– ಚಿಕ್ಕಮಗಳೂರು ಕ್ಷೇತ್ರ
Published 27 ಮಾರ್ಚ್ 2024, 23:36 IST
Last Updated 27 ಮಾರ್ಚ್ 2024, 23:36 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಇಂದಿರಾಗಾಂಧಿ ಸ್ಪರ್ಧಿಸಿದ್ದ ಕಾರಣಕ್ಕೆ ದೇಶದುದ್ದಕ್ಕೂ ಗಮನ ಸೆಳೆದಿದ್ದ ಚಿಕ್ಕಮಗಳೂರು ಕ್ಷೇತ್ರ, 2008ರ ಕ್ಷೇತ್ರ ವಿಂಗಡಣೆ ಬಳಿಕ ‘ಉಡುಪಿ’ಯನ್ನು ಒಡಲು ತುಂಬಿಸಿಕೊಂಡು ತನ್ನ ಚಹರೆಯನ್ನೇ ಬದಲಿಸಿಕೊಂಡಿದೆ. ಅಲ್ಲಿಯವರೆಗೂ ಮಲೆನಾಡು–ಬಯಲುಸೀಮೆಯವರ ಹಿಡಿತದಲ್ಲಿದ್ದ ಈ ಕ್ಷೇತ್ರಕ್ಕೆ ಉಡುಪಿ ಅಂಟಿಕೊಂಡಿದ್ದರಿಂದಾಗಿ ಘಟ್ಟದ ಕೆಳಗಿನವರೇ ಮೇಲುಗೈ ಸಾಧಿಸಿದರು. ಬಯಲುಸೀಮೆ, ಮಲೆನಾಡು, ಕರಾವಳಿ ಹೀಗೆ ಭೌಗೋಳಿಕ ವೈವಿಧ್ಯವುಳ್ಳ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಜಯಪ್ರಕಾಶ ಹೆಗ್ಡೆ ಪರಸ್ಪರ ಎದುರಾಳಿಗಳು. ಪರಿಶಿಷ್ಟ ಜಾತಿಯವರು, ಗಿರಿಜನರು, ಒಕ್ಕಲಿಗರು, ಮುಸ್ಲಿಮರು, ಬಿಲ್ಲವರು, ಬಂಟರು, ಕ್ರೈಸ್ತರು, ಲಿಂಗಾಯತರು ಹೀಗೆ ಎಲ್ಲ ಜಾತಿ–ಧರ್ವದವರೂ ಪ್ರಧಾನವಾಗಿಯೇ ಇದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ, ಅವರಿಗಿದ್ದ ವಿರೋಧದ ಕಾರಣಕ್ಕೆ, ಸದ್ಯ ವಿರೋಧ ಪಕ್ಷದ ನಾಯಕರೂ ಆಗಿರುವ ಪೂಜಾರಿಯವರನ್ನು ಲೋಕಸಭೆಗೆ ಹುರಿಯಾಳಾಗಿಸಲಾಗಿದೆ. ಕ್ಷೇತ್ರ ರಚನೆಯಾದ ಬಳಿಕ ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡುತ್ತಲೇ ಇರುವ ಹೆಗ್ಡೆಯವರು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರ ಕಸಿದುಕೊಂಡು, ಹಸ್ತ ಅರಳಿಸಿದ್ದರು. ಸೋತ ಬಳಿಕ, ಕಮಲ ಮುಡಿದಿದ್ದ ಹೆಗ್ಡೆ, ಚುನಾವಣೆ ಹೊತ್ತಿಗೆ ‘ಹಸ್ತ’ಲಾಘವ ಮಾಡಿದ್ದಾರೆ. ಘಟ್ಟದ ಮೇಲಿನ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತವೂ ನಿರ್ಣಾಯಕವಾಗಿದ್ದು, ಸ್ಥಳೀಯ ಮತಗಳ ಮೇಲೆ ಪ್ರಭಾವವನ್ನೂ ಹೊಂದಿದ್ದಾರೆ. ‘ವೈಟ್‌ ಕಾಲರ್‌’ ರಾಜಕಾರಣಿಗಳಿಗೆ ಮಣೆ ಹಾಕುವ ಈ ಸಮುದಾಯ, ಹೆಗ್ಡೆಯವರನ್ನು ಕೈ ಹಿಡಿದು ದಡ ಹತ್ತಿಸುತ್ತಾರೋ, ಕಮಲದ ಭದ್ರಕೋಟೆಯಂತಿದ್ದ ಈ ಕ್ಷೇತ್ರ ‘ಪೂಜಾರಿ’ಯವರಿಗೆ ಆರತಿ ಬೆಳಗಿ, ಕಮಲ ಅರಳಿಸುತ್ತದೋ ಎಂಬುದು ಲೆಕ್ಕಕ್ಕೆ ನಿಲುಕದ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT