ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮರಳಲು ಸನ್ನದ್ಧರಾಗಿದ್ದು, ಇದಕ್ಕಾಗಿ ವಿದಿಶಾ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚೌಹಾಣ್ ಅವರ ವಿರುದ್ಧ ಕಾಂಗ್ರೆಸ್ ಕೂಡ ಪ್ರಬಲ ಅಭ್ಯರ್ಥಿಯಾದ ಪ್ರತಾಪ್ ಭಾನು ಶರ್ಮಾ ಅವರನ್ನು ಸ್ಪರ್ಧೆಗಿಳಿಸಿದೆ.
ಹಲವು ವರ್ಷಗಳಿಂದ ಚುನಾವಣಾ ರಾಜಕೀಯದಿಂದ ದೂರವುಳಿದಿದ್ದ ಪ್ರತಾಪ್ ಅವರು ಅಖಾಡಕ್ಕಿಳಿದಿರುವುದು ಸ್ಪರ್ಧೆಯನ್ನು ರಂಗೇರಿಸಿದೆ. 1980 ಮತ್ತು 1984ರಲ್ಲಿ ಈ ಕ್ಷೇತ್ರದಿಂದ ಪ್ರತಾಪ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಇವರು ಸದ್ಯ ಪಕ್ಷದ ಮಧ್ಯಪ್ರದೇಶ ರಾಜ್ಯ ಘಟಕ ಉಪಾಧ್ಯಕ್ಷರಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಪ್ರತಾಪ್, ಈ ಕ್ಷೇತ್ರದ ಪ್ರಭಾವಿ ನಾಯಕರಲ್ಲೊಬ್ಬರು.