ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಸಂಸತ್ನಲ್ಲಿ ಟೀಕಾಪ್ರಹಾರಗಳನ್ನು ಮಾಡುತ್ತಾ ಸದಾ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಈ ಬಾರಿಯೂ ಪಶ್ಚಿಮಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಧುಮುಕಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 6,14,872 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ಕಲ್ಯಾಣ್ ಚೌಬೆ ಅವರನ್ನು ಪರಾಭವಗೊಳಿಸಿದ್ದರು. ಟಿಎಂಸಿಯ ದಿಟ್ಟ ನಾಯಕಿಯೆಂದೇ ಬಿಂಬಿತವಾಗಿರುವ ಅವರನ್ನು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣದಲ್ಲಿ, ಸಂಸತ್ತಿನ ನೀತಿ ಸಮಿತಿಯು ದೋಷಿ ಎಂದು ಹೇಳಿತ್ತು. ಬಳಿಕ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಮಹುವಾ ಅವರ ಬೆನ್ನಿಗೆ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯಾವ ಟೀಕೆಗಳಿಗೂ ತಲೆಕೆಡಿಸಿಕೊಳ್ಳದೆ ಅವರನ್ನು ಮತ್ತೆ ಅಖಾಡಕ್ಕಿಳಿಸಿದ್ದಾರೆ.