ಚೆನ್ನೈ: ತಮಿಳುನಾಡಿನ 16 ಲೋಕಸಭಾ ಕ್ಷೇತ್ರಗಳಿಗೆ ಎಐಎಡಿಎಂಕೆ ಗುರುವಾರ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ವಕೀಲೆ ಸಿಮ್ಲಾ ಮುತ್ತುಚೋಜನ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಅವರನ್ನು ತಿರುನೆಲ್ವೇಲಿ ಕ್ಷೇತ್ರದ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ಅವರು 2016ರಲ್ಲಿ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಜಯಲಲಿತಾ ವಿರುದ್ಧ ಸೋತಿದ್ದರು.
ಡಿಎಂಕೆ ಮಾಜಿ ನಾಯಕ ಎಸ್.ಪಿ.ಸರ್ಗುಣ ಪಾಂಡಿಯನ್ ಅವರ ಸೊಸೆಯಾದ ಮುತ್ತುಚೋಜನ್ ಅವರು ಇತ್ತೀಚೆಗಷ್ಟೇ ಎಐಎಡಿಎಂಕೆ ಸೇರಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಅವರು ಎಐಎಡಿಎಂಕ ಘೋಷಿಸಿದ ಏಕೈಕ ಮಹಿಳಾ ಅಭ್ಯರ್ಥಿ. ಪಕ್ಷವು ಒಟ್ಟು ಐವರು ವಕೀಲರಿಗೆ ಟಿಕೆಟ್ ಘೋಷಿಸಿದೆ.
ಹೊಸ ಪಟ್ಟಿಯಲ್ಲಿ ಮೂವರು ವೈದ್ಯರ ಹೆಸರನ್ನು ಪ್ರಕಟಿಸಲಾಗಿದ್ದು, ಪಕ್ಷವು ಒಟ್ಟಾರೆ ಐವರು ವೈದ್ಯರನ್ನು ಅಭ್ಯರ್ಥಿಯಾಗಿ ಹೆಸರಿಸಿದಂತಾಗಿದೆ.
ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ ಎಐಎಡಿಎಂಕೆ 32 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಅದರ ಮಿತ್ರ ಪಕ್ಷಗಳಾದ ಡಿಎಂಡಿಕೆ, ಪುತಿಯಾ ತಮಿಳಗಂ ಮತ್ತು ಎಸ್ಡಿಪಿಐಗೆ ಏಳು ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.
ಮಾರ್ಚ್ 20ರಂದು ಮೊದಲ ಪಟ್ಟಿಯಲ್ಲಿ 16 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು.