ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ. ಬಂಗಾಳ: BJP ಕೈಹಿಡಿಯದ ಸಂದೇಶಖಾಲಿ ಪ್ರಕರಣ; TMCಗೆ 2ಲಕ್ಷ ಮತಗಳ ಅಂತರದ ಗೆಲುವು

Published 4 ಜೂನ್ 2024, 13:20 IST
Last Updated 4 ಜೂನ್ 2024, 13:20 IST
ಅಕ್ಷರ ಗಾತ್ರ

ಬಸಿರಾತ್‌: ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಟಿಎಂಸಿ ಶಾಸಕನ ದೌರ್ಜನ್ಯವನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಬಾರಿ ಚುನಾವಣೆ ಎದುರಿಸಿತ್ತು. ಆದರೆ ಮಂಗಳವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಸಂದೇಶಖಾಲಿ ಇರುವ ಬಸಿರಾತ್‌ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಟಿಎಂಸಿ ಅಭ್ಯರ್ಥಿ 2ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಸಂದೇಶಖಾಲಿ ಪ್ರಕರಣದ ನಂತರ ಬಿಜೆಪಿಯು ಸ್ಥಳೀಯರಾದ ರೇಖಾ ಪಾತ್ರಾ ಅವರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿತ್ತು. ಈ ಕ್ಷೇತ್ರದಿಂದ ಹಾಜಿ ನೂರುಲ್ ಇಸ್ಲಾಮ್ ಅವರನ್ನು ಟಿಎಂಸಿ ಕಣಕ್ಕಿಳಿಸಿತ್ತು.

ಆಡಳಿತಾರೂಢ ಪಕ್ಷದ ಶಾಸಕನಿಂದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಭೂಮಿ ಕಬಳಿಕೆ ನಡೆಯುತ್ತಿದೆ ಎಂಬ ಆರೋಪ ದೇಶವ್ಯಾಪಿ ಸುದ್ದಿಯಾಗಿತ್ತು. ಸ್ಥಳಕ್ಕೆ ಕೇಂದ್ರ ಮಹಿಳಾ ಆಯೋಗ ಸೇರಿದಂತೆ ಪ್ರಮುಖ ಸಂಸ್ಥೆಗಳು ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಸಂತ್ರಸ್ತೆಯರು ಪ್ರಧಾನಿಯನ್ನೂ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದೂ ಸುದ್ದಿಯಾಗಿತ್ತು. ಆದರೆ ಇವು ಯಾವುವೂ ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿಯಲಿಲ್ಲ.

ಹಾಲಿ ಸಂಸದ ನಸರ್ತ್ ಜಾನ್ ಬದಲು, ಟಿಎಂಸಿ ಈ ಬಾರಿ ಹಾಜಿ ನೂರುಲ್ ಅವರನ್ನು ಕಣಕ್ಕಿಳಿಸಿತ್ತು. ‘ಸಂದೇಶಖಾಲಿ ಕುರಿತ ಸುಳ್ಳು ಆರೋಪಗಳನ್ನು ಬಿಜೆಪಿ ಹಬ್ಬಿಸಿತ್ತು. ಜನರು ಅದನ್ನು ನಂಬಲಿಲ್ಲ. ಈ ಪ್ರಕರಣ ಕುರಿತು ಹರಿದಾಡಿದ ವಿಡಿಯೊಗಳಲ್ಲಿ ಬಿಜೆಪಿ ಕೈವಾಡ ಇರುವುದನ್ನು ಜನರು ಅರಿತಿದ್ದರು. ಇಂಥದ್ದೊಂದು ಕೆಟ್ಟ ರಾಜಕೀಯವನ್ನು ಬಿಜೆಪಿ ಮಾಡಿತು. ಸತ್ಯವನ್ನು ಜನರು ಅರಿತಿದ್ದರು ಮತ್ತು ಈ ಹಿಂದೆ ಪಕ್ಷ ಕೈಗೊಂಡ ಕೆಲಸ ಕಾರ್ಯಗಳು ನನ್ನ ಗೆಲುವಿಗೆ ನೆರವಾಯಿತು’ ಎಂದು ನೂರುಲ್ ಹೇಳಿದ್ದಾರೆ.

‘ಇದು ಮಮತಾ ಅವರ ಮ್ಯಾಜಿಕ್‌. ಅವರ ಮೇಲೆ ಮತದಾರರು ಇಟ್ಟ ನಂಬಿಕೆಯಿಂದ ಈ ಗೆಲುವು ಸಾಧ್ಯವಾಗಿದೆ. ಕೇವಲ ಷಡ್ಯಂತ್ರ ರಚಿಸಿ, ದೀದಿಯನ್ನು ಸೋಲಿಸುತ್ತೇವೆ ಎಂಬುದೇ ದೊಡ್ಡ ಸುಳ್ಳು. ಆದರೆ ಕ್ಷೇತ್ರದಲ್ಲಿ ಕೈಹಿಡಿದಿದ್ದು ಪಕ್ಷ ಕೈಗೊಂಡಿರುವ ಕೆಲಸಕಾರ್ಯಗಳು’ ಎಂದಿದ್ದಾರೆ.

ಬಸಿರಾತ್‌ನಲ್ಲಿ ಮುಸ್ಲಿಂ ಮತಗಳು ಶೇ 54ರಷ್ಟಿವೆ ಎಂದು ಪಿಟಿಐ ವರದಿ ಮಾಡಿದೆ. ಚುಣಾವಣಾ ಆಯೋಗದ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಉತ್ತಮ ಸಾಧನೆ ಮಾಡಿದೆ. 

2019ರ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ನಸ್ರತ್‌ ಜಾನ್ ಅವರು ಶೇ 54.56ರಷ್ಟು ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT