ಭೋಪಾಲ್: ಮಧ್ಯಪ್ರದೇಶದ ಮಂಡಲಾ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದ ವೇಳೆ ಕಟ್ಟಿದ್ದ ಬ್ಯಾನರ್ನಲ್ಲಿ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಫಗ್ಗನ್ ಸಿಂಗ್ ಕುಲಸ್ತೆ ಅವರ ಫೋಟೊ ಇದ್ದದ್ದು ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟುಮಾಡಿದೆ.
ಈ ಘಟನೆಯನ್ನು ಕಾಂಗ್ರೆಸ್, ‘ಮಾನವ ದೋಷ’ ಎಂದು ಹೇಳಿದರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ‘ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮಂಡಲಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಧನೋರಾ ಎಂಬಲ್ಲಿ ಸೋಮವಾರ ರಾಹುಲ್ ಅವರ ಪ್ರಚಾರ ಸಭೆ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಕಟ್ಟಿದ್ದ ಬ್ಯಾನರ್ನಲ್ಲಿ ಕುಲಸ್ತೆ ಅವರ ಚಿತ್ರವೂ ಇತ್ತು. ತಪ್ಪು ಗಮನಕ್ಕೆ ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಕುಲಸ್ತೆ ಅವರ ಚಿತ್ರದ ಮೇಲೆ ಕಾಂಗ್ರೆಸ್ ಶಾಸಕ ರಜನೀಶ್ ಹರವಂಶ್ ಸಿಂಗ್ ಅವರ ಚಿತ್ರ ಅಂಟಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
‘ಕಾಂಗ್ರೆಸ್, ಈ ಚುನಾವಣೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ. ಅವರ ಬ್ಯಾನರ್ನಲ್ಲಿ ನಮ್ಮ ಅಭ್ಯರ್ಥಿಯ ಚಿತ್ರ ಹಾಕಿದ್ದಾರೆ. ಅವರು ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಪ್ರತಿಕ್ರಿಯಿಸಿದ್ದಾರೆ.