ತ್ರಿಶೂರ್: ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರ ಸೋಲಿನ ಕುರಿತು ಪರಾಮರ್ಶೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರ ಮಧ್ಯೆ ಮಾರಾಮರಿ ನಡೆದಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಸಿ ಕಚೇರಿ ಕಾರ್ಯದರ್ಶಿ ಸಜೀವನ್ ಕುರಿಯಾಚಿರಾ ಅವರ ದೂರಿನ ಮೇರೆಗೆ ತ್ರಿಶೂರ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಜೋಸ್ ವಲ್ಲೂರ್ ಮತ್ತು ಪಕ್ಷದ ಇತರ 19 ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
20 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕಾನೂನುಬಾಹಿರ ಸಭೆ, ಗಲಭೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಜೋಸ್ ವಲ್ಲೂರ್ ಬೆಂಬಲಿಗರು ನನಗೆ ಥಳಿಸಿದ್ದಾರೆ ಎಂದು ಕುರಿಯಾಚಿರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತ್ರಿಶೂರ್ನಲ್ಲಿ ಪಕ್ಷದ ಸೋಲಿಗೆ ಮಾಜಿ ಸಂಸದ ಟಿ.ಎನ್. ಪ್ರತಾಪನ್ ಮತ್ತು ಜೋಸ್ ವಲ್ಲೂರ್ ಅವರೇ ಕಾರಣವೆಂದು ಆರೋಪಿಸಿ ಮುರಳೀಧರನ್ ಬೆಂಬಲಿಗರು ಪೋಸ್ಟರ್ಗಳನ್ನು ಅಂಟಿಸಿ ಆಕ್ರೋಶ ಹೊರಹಾಕಿದ್ದರು.
ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ, ನಟ ಸುರೇಶ್ ಗೋಪಿ ಅವರು ಮುರಳೀಧರನ್ ವಿರುದ್ಧ 74,686 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.