ಚಂಡೀಗಢ: ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಸಾವಿತ್ರಿ ಜಿಂದಾಲ್ ಅವರ ಪುತ್ರ, ಉದ್ಯಮಿ ನವೀನ್ ಜಿಂದಾಲ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ಬುಧವಾರ ತಡರಾತ್ರಿ 84 ವರ್ಷದ ಸಾವಿತ್ರಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.
'ನಾನು 10 ವರ್ಷಗಳ ಕಾಲ ಹಿಸಾರ್ನ ಜನರನ್ನು ಶಾಸಕಿಯಾಗಿ ಪ್ರತಿನಿಧಿಸಿದ್ದೇನೆ. ಅಲ್ಲದೆ ಸಚಿವೆಯಾಗಿ ಹರಿಯಾಣದ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಹಿಸಾರ್ನ ಜನರು, ನನ್ನ ಕುಟುಂಬದ ಸಲಹೆಯ ಮೇರೆಗೆ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಹರಿಯಾಣದ ಮಾಜಿ ಸಚಿವ ಒ.ಪಿ. ಜಿಂದಾಲ್ ಅವರ ಮಗನಾಗಿರುವ ನವೀನ್ ಜಿಂದಾಲ್, ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.